



ವಿಟ್ಲ: ಶಬೀರ್ ಅಲಿಯಾಸ್ ಚಬ್ಬಿ ಅವರ ನಿಖಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ವಿಟ್ಲ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಈ ಘಟನೆಯು ಶಬೀರ್ ಮದುವೆಗೆ ಸಹಕರಿಸಿದ್ದ ಕಾರಣಕ್ಕೆ ನಡೆದಿದೆ ಎನ್ನಲಾಗಿದ್ದು, ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ಪ್ರತ್ಯೇಕವಾಗಿ ದಾಖಲಾಗಿದೆ.ಅಬುಸಾಲಿ ಆದಂ ಕುಂಞ ಹಲ್ಲೆಗೊಳಗಾದವರು. ಇವರು ಶಬೀರ್ ಯಾನೆ ಚಬ್ಬಿ ಅವರ ನಿಖಾಹ ಕಾರ್ಯಕ್ರಮಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ.
ಆರೋಪಿಗಳಲ್ಲಿ ಒಬ್ಬನಾದ ಅಬ್ದುಲ್ ರಹಿಮಾನ್ ಎಂಬಾತನ ಪ್ರಚೋದನೆಯ ಮೇರೆಗೆ ರಯೀಸ್ ಎಂಬಾತ ಕಬ್ಬಿಣದ ರಾಡ್ನಿಂದ ಅಬುಸಾಲಿ ಅವರ ಹಣೆಗೆ ಹೊಡೆದು ಗಾಯಪಡಿಸಿದ್ದಾನೆ. ಅಲ್ಲದೆ, ಇತರ ಆರೋಪಿಗಳು ಸೇರಿ ಅವರನ್ನು ನೆಲಕ್ಕೆ ದೂಡಿ ತುಳಿದು, ಕಲ್ಲು ಎಸೆದು ಕಾಲಿಗೆ ಗಾಯಪಡಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.ಅಬುಸಾಲಿ ಆದಂ ಕುಂಞ ಅವರ ದೂರಿನ ಅನ್ವಯ, ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 142/2025 ರಂತೆ ಕಲ໐: 118(1), 115(2), 351(2) r/w 190 BNS 2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಕೈಗೊಂಡಿರುವ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಅಹಮದ್ ರಯೀಸ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ಇದೇ ಘಟನೆಗೆ ಸಂಬಂಧಿಸಿದಂತೆ. ಅಹಮದ್ ರಯೀಸ್ ಎಂಬಾತನು ತನ್ನ ಮೇಲೂ ಇತರರು ಸೇರಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಪ್ರತ್ಯೇಕ ದೂರನ್ನು ನೀಡಿದ್ದಾನೆ. ಈ ಪ್ರತಿ ದೂರಿನ ಅನ್ವಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 144/2025 ರಂತೆ ಕಲಂ: 352, 118(1), 115(2), 351(2) r/w 3(5) BNS-2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.








