ಮುಂಬೈನಲ್ಲಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಂಟ ಸಮುದಾಯದ ಪ್ರತಿಷ್ಟಿತ ಉದ್ಯಮಿಗಳನ್ನು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿರುವ ವಿಟ್ಲ-ಕಲ್ಲಂಗಳ ಮೂಲದ ಜಯಪ್ರಕಾಶ್ ಶೆಟ್ಟಿ ಅಲಿಯಾಸ್ ಜೆಪಿ ಶೆಟ್ಟಿ ಎಂಬಾತನ ವಿರುದ್ಧ ಕ್ರೈಂ ಬ್ರಾಂಚ್ ಪೊಲೀಸರಿಗೆ ದೂರು ನೀಡಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಉದ್ಯಮಿಗಳ ವಿರುದ್ಧ ಮಾನ ಹಾನಿಕಾರಕ ವಿಡಿಯೋ ಹೇಳಿಕೆಗಳನ್ನು ಅಪ್ಲೋಡ್ ಮಾಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಬಂಟ್ವಾಳ: ಹೆಂಡತಿಯೊಂದಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ತಮ್ಮನನ್ನು ಬರ್ಬರವಾಗಿ ಹತ್ಯೆಗೈದ ಅಣ್ಣ!
ಮುಂಬೈನ ಹೆಸರಾಂತ ಉದ್ಯಮಿಗಳಾದ ರವಿ ಶೆಟ್ಟಿ, ವಿರಾರ್ ಶಂಕರ್ ಶೆಟ್ಟ, ಕರ್ನಿರೆ ವಿಶ್ವನಾಥ ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ಕಳತ್ತೂರು ವಿಶ್ವನಾಥ ಶೆಟ್ಟಿ ಸೇರಿದಂತೆ ಹಲವರ ವಿರುದ್ಧ ಆರೋಪಿ ಅವಹೇಳನಕಾರಿ ವಿಡಿಯೋಗಳನ್ನು ಮಾಡಿರುವುದಾಗಿ ಉಲ್ಲೇಖಿಸಲಾಗಿದೆ.
ಇತ್ತೀಚಿಗಷ್ಟೇ ಕಳತ್ತೂರು ವಿಶ್ವನಾಥ ಶೆಟ್ಟಿ ವಿರುದ್ಧ ಮಾಡಿರುವ ವಿಡಿಯೋದಿಂದ ಜೆ.ಪಿ ಶೆಟ್ಟಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ಇದೇ ಕಾರಣಕ್ಕಾಗಿ ಪೊಲೀಸರು ಈತನ ಹುಡುಕಾಟ ನಡೆಸುತ್ತಿದ್ದಾರೆ. ವಿಶ್ವನಾಥರವರನ್ನು ದೂರವಾಣಿ ಮೂಲಕ ಸಂಪರ್ಕಿಸಿರುವ ಜೆಪಿ ಶೆಟ್ಟಿ ಲಬೋ ಲಬೋ ಎಂದು ಬಾಯಿ ಬಡಿದುಕೊಂಡಿರುವುದಲ್ಲದೆ ತನ್ನ ವಿರುದ್ಧ ನೀಡಿರುವ ಪೊಲೀಸ್ ದೂರನ್ನು ಹಿಂದೆಗೆದುಕೊಳ್ಳುವಂತೆ ದಮ್ಮಯ್ಯ ಹಾಕುತ್ತಿರುವ ಆಡಿಯೋವೊಂದು ಇದೀಗ ಎಲ್ಲೆಡೆ ವೈರಲ್ ಆಗಿದೆ.
ಮಹಾರಾಷ್ಟ್ರದ ಎನ್ ಸಿಪಿ ಪಕ್ಷದಲ್ಲಿ ಕಳತ್ತೂರು ವಿಶ್ವನಾಥ ಶೆಟ್ಟಿ ಪವರ್ ಫುಲ್ ವ್ಯಕ್ತಿತ್ವದವರಾಗಿ ಗುರುತಿಸಿಕೊಂಡಿದ್ದಾರೆ. ಪ್ರಭಾವಿ ರಾಜಕಾರಣಿ ಶರದ್ ಪವಾರ್ ರವರ ನಿಕಟವರ್ತಿಯೂ ಆಗಿದ್ದಾರೆ. ಕೊರೊನ ಲಾಕ್ ಡೌನ್ ನಿಂದಾಗಿ ಮೊದಲೇ ಸಂಕಷ್ಟದಲ್ಲಿರುವ ಉದ್ಯಮಿಗಳನ್ನು ಜಿಪಿ ಶೆಟ್ಟಿ ಬ್ಲಾಕ್ ಮೆಲ್ ಮಾಡುತ್ತಿರುವ ಪ್ರಕರಣವನ್ನು ಅವರು ಗಂಭೀರವಾಗಿ ಪರಿಗಣಿಸಿ ದೂರು ನೀಡಿದ್ದಾರೆ.
ಆರೋಪಿ ಜೆಪಿ ಶೆಟ್ಟಿಯ ಸುಳ್ಳು ಆರೋಪಗಳ ವಿಡಿಯೋ ಪ್ರಕರಣದ ಹಿಂದೆ ಉಡುಪಿ ಮೂಲದ ಸದ್ಯ ಮುಂಬಯಿನಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರ ಕೈವಾಡವನ್ನು ಶಂಕಿಸಲಾಗಿದೆ. ಇದಕ್ಕಾಗಿ ಜಿಪಿ ಶೆಟ್ಟಿ ಮೊಬೈಲ್ ನ ಕಾಲ್ ಡೀಟೇಲ್ ಪರಿಶೀಲನೆಗೂ ಪೊಲೀಸರು ಮುಂದಾಗಿದ್ದಾರೆ. ವಿಡಿಯೋದಲ್ಲಿ ಪಿ.ವಿ ಶೆಟ್ಟಿ ಎರ್ಮಳ್ ಹರೀಶ್ ಶೆಟ್ಟಿ ಸುಭಾಷ್ ಬರ್ಪಣಿ ವಿಶ್ವನಾಥ್ ಶೆಟ್ಟಿ ಮತ್ತಿತರರ ಹೆಸರುಗಳನ್ನು ಉಲ್ಲೇಖಸಿರುವುದರ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಉಡುಪಿ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ; ವೃದ್ದನ ಬಂಧನ
ಸಾಮಾಜಿಕ ಜಾಲತಾಣಗಳಲ್ಲಿ ತಾನು ಆಮ್ ಆದ್ಮಿ ಕಾ ಸಿಪಾಯಿ ಎಂದೇ ಮಾತಿಗಾರಂಭಿಸಿ ಜೆಪಿ ಶೆಟ್ಟಿ ಈ ಹಿಂದೆ ಪಣಿಯೂರು ಸಾಧು ಶೆಟ್ಟಿ ಸಹಚರನಾಗಿಯೂ ಗುರುತಿಸಿಕೊಂಡಿದ್ದ ಮಂಗಳೂರಿನಲ್ಲಿ ಕೊಲೆಗೀಡಾದ ಪುತ್ತೂರಿನ ಸುರೇಶ್ ರೈನ ನಿಕಟ ಸಂಬಂಧಿಯಾಗಿರುವ ಈತ ಕುಖ್ಯಾತ ಪಾತಕಿಗಳಾದ ರವಿ ಪೂಜಾರಿ ಹೇಮಂತ ಪೂಜಾರಿಯೊಂದಿಗೆ ಹೊಂದಿದ್ದ ಸಂಪರ್ಕಗಳ ಬಗ್ಗೆಯೂ ತನಿಖೆ ನಡೆಸಲು ಮುಂಬೈ ಕ್ರೈಂ ಬ್ರಾಂಚ್ ನ ಪೊಲೀಸರು ಮುಂದಾಗಿದ್ದಾರೆ. ಆರೋಪಿ ಸದ್ಯ ತಲೆಮರೆಸಿಕೊಂಡಿದ್ದಾನೆ. ಪತ್ತೆ ಕಾರ್ಯವನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.