ವಿಟ್ಲ: ವಿದ್ಯುತ್ ಶಾಕ್ ತಗುಲಿ ಕೂಲಿ ಕಾರ್ಮಿಕರೋರ್ವರು ಮೃತಪಟ್ಟ ಘಟನೆ ಅ.೬ರಂದು ರಾತ್ರಿ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸ್ಯ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಕರೋಪಾಡಿ ಗ್ರಾಮದ ಚೆಲ್ಲಂಗಾರು ನಿವಾಸಿ ಗೋವಿಂದ ನಾಯ್ಕರ ಪುತ್ರ, ಮಂಗಿಲಪದವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ವಿಶ್ವನಾಥ(36 ವ.) ರವರು ಮೃತ ದುರ್ದೈವಿಯಾಗಿದ್ದಾರೆ.
ವಿಶ್ವಾನಾಥರವರು ಕಳೆದ ಕೆಲಸಮಯಗಳಿಂದ ವಿಟ್ಲ ಕಸಬ ಗ್ರಾಮದ ದೇವಸ್ಯ ಎಂಬಲ್ಲಿನ ಅಶ್ವತ್ ರವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ಅ.6ರಂದು ರಾತ್ರಿ ವಿಶ್ವನಾಥರವರು ಅಶ್ವತ್ ರವರ ತೋಟದ ಪಂಪ್ ಶೆಡ್ ನಲ್ಲಿ ಮೋಟರ್ ಸ್ವಿಚ್ ಹಾಕಲೆಂದು ತೆರಳಿದಾಗ ವಿದ್ಯುತ್ ಬಾರದ ಹಿನ್ನೆಲೆಯಲ್ಲಿ ಅಲ್ಲೇ ಪಕ್ಕದಲ್ಲಿದ್ದ ವಿದ್ಯುತ್ ಕಂಬದಲ್ಲಿದ್ದ ಸರ್ವೀಸ್ ವಯರನ್ನು ಬಿದಿರಿನ ಕೋಲಿನಿಂದ ಸರಿಪಡಿಸುತ್ತಿದ್ದ ವೇಳೆ ವಿದ್ಯುತ್ ಶಾಕ್ ತಗುಲಿ ಗಂಭೀರ ಗಾಯಗೊಂಡಿದ್ದು, ಬಳಿಕ ಅವರನ್ನು ವಿಟ್ಲದ ಸರಕಾರಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ದಾರಿ ಮಧ್ಯೆ ಅವರು ಮೃತಪಟ್ಟಿರುವುದಾಗಿ ಮೃತರ ಸಹೋದರ ವಸಂತ ನಾಯ್ಕರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.