ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಗೆ ಮೂಹೂರ್ತ ನಿಗದಿಯಾಗಿದ್ದು ತಿಳಿದೇ ಇದೆ. ಇಂದು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದ್ದು ಕಾಂಗ್ರೆಸ್, ಬಿಜೆಪಿ, ಎಸ್.ಡಿ.ಪಿ.ಐ ನಡುವೆ ಜಿದಾಜಿದ್ದಿನ ಕಾದಾಟದ ಕ್ಷಣಕ್ಕೆ ವಿಟ್ಲ ಸಾಕ್ಷಿಯಾಗಲಿದೆ.
ಇತ್ತೀಚಿಗಿನ ಬೆಳವಣಿಗೆ ವಿಟ್ಲದ ಮತದಾನ ಬಾಂಧವರಲ್ಲಿ ಆತಂಕ, ಗೊಂದಲ ಸೃಷ್ಟಿಸಿರೋದಂತೂ ಸುಳ್ಳಲ್ಲ. ಪಕ್ಷಾಂತರ ಹಾಗೂ ಈ ಹಿಂದಿನ ಜನಪ್ರತಿನಿಧಿಗಳ ಕಾರ್ಯ ಜನರನ್ನು ಗೊಂದಲಕ್ಕೆ ಈಡುಮಾಡಿದೆ. ಅಂತೆಯೇ ಬಿಜೆಪಿ ಟಿಕೆಟ್ ನೀಡದೇ ವಂಚಿಸಿರುವುದು ಬಿಜೆಪಿ ಪಾಳಯದಲ್ಲಿ ಒಳಜಗಳವನ್ನು ಸೃಷ್ಟಿಸಿದೆ. ಇನ್ನು ವಾರ್ಡ್ ನಂಬರ್ 14ರಲ್ಲಿ (ಅನಿಲ ಕಟ್ಟೆ) ತ್ರಿಕೋನ ಸ್ಪರ್ಧೆ ಏರ್ಪಡುವ ಎಲ್ಲಾ ಲಕ್ಷಣಗಳು ಸನ್ನಿಹಿತವಾಗಿದೆ. ವಾರ್ಡ್ ನಂಬರ್ 14 ರಲ್ಲಿ ಬಿಜೆಪಿಯು ಅಶೋಕ್ ಕುಮಾರ್ ಶೆಟ್ಟಿ ಅವರನ್ನು ಕಣಕ್ಕಿಳಿಸಿದ್ರೆ, ಕಾಂಗ್ರೆಸ್ ಮನೋಹರ್ ಲ್ಯಾನ್ಸಿ ಅವರಿಗೆ ಮಣೆಹಾಕಿದೆ.
ಭುಗಿಲೆದ್ದ ಅಸಮಾಧಾನ; ಪಕ್ಷೇತರ ಅಭ್ಯರ್ಥಿಯಾಗಿ ಫೀಲ್ಡ್’ಗಿಳಿದ ಮೋಹನ್ ಸೇರಾಜೆ..!
ಅನಿಲ ಕಟ್ಟೆ ವಾರ್ಡ್ ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಇದಕ್ಕೆಲ್ಲಾ ಮೂಲ ಕಾರಣ ಬಿಜೆಪಿಯು ಅಶೋಕ್ ಕುಮಾರ್ ಶೆಟ್ಟಿ ಅವರನ್ನು ಅಭ್ಯರ್ಥಿಯನ್ನಾಗಿಸಿದ್ದು..! ಕಬಕದಲ್ಲಿ ನಡೆದ ಎಮ್.ಎಲ್.ಸಿ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್’ನ ಅಶೋಕ್ ಕುಮಾರ್ ಶೆಟ್ಟಿ ಅವರನ್ನು ಅಧೀಕೃತವಾಗಿ ಬಿಜೆಪಿಗೆ ಸೇರ್ಪಡೆ ಮಾಡಲಾಗಿತ್ತು. ಈ ಹಿಂದೆ ಮೋಹನ್ ಅವರ ಪತ್ನಿ ಸಂಧ್ಯಾ ಮೋಹನ್ ಬಿಜೆಪಿಯಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಆದ್ರೆ ಈ ಬಾರಿ ಸಂಧ್ಯಾ ಅವರಿಗೆ ಬಿಜೆಪಿ ಟಿಕೆಟ್ ನೀಡದಿರುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿನ್ನಲೆಯಲ್ಲಿ ಅನಿಲ ಕಟ್ಟೆ ವಾರ್ಡ್ನಿಂದ ಕಾರ್ಯಕರ್ತರ ಅಪೇಕ್ಷೆಯ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಮೋಹನ್ ಸೇರಾಜೆ ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದಾಗಿ ಕಾಂಗ್ರೆಸ್, ಬಿಜೆಪಿ, ಪಕ್ಷೇತರ ಅಭ್ಯರ್ಥಿಗಳ ನಡುವೆ ಟ್ರೈಆಂಗಲ್ ಫೈಟ್ ಶುರುವಾಗಿದೆ. ಮತದಾರರು ಯಾರಿಗೆ ಒಲವು ತೋರಿಸಿ ಕೈ ಹಿಡಿಯುತ್ತಾರೆ ಎಂಬುವುದು ಕಾದುನೋಡಬೇಕಾಗಿದೆ.