ವಿಟ್ಲ: ಮಹಿಳೆಯೋರ್ವರಿಗೆ ವ್ಯಕ್ತಿಯೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿ, ಮಾರಕಸ್ತ್ರ ಬೀಸಿ, ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ಕನ್ಯಾನ ಗ್ರಾಮದ ಪಂಜಾಜೆ ಎಂಬಲ್ಲಿ ನಡೆದಿದೆ.
ಆರೋಪಿಯನ್ನು ಜಯರಾಮ ಎಂದು ಹೇಳಲಾಗಿದೆ. ವೀಣಾ ಎಂಬವರ ಮನೆಯ ಬಳಿ ಇರುವ ಕೋ ಕೋ ಗಿಡವನ್ನು ಆರೋಪಿ ಜಯರಾಮ ಕಡಿಯುತ್ತಿದ್ದ ವೇಳೆ ವೀಣಾ ರವರು ಜಯರಾಮನ ಬಳಿ ಕೋ ಕೋ ಗಿಡವನ್ನು ಯಾಕೆ ಕಡಿಯುತ್ತಿದ್ದೀಯಾ ಎಂದು ಕೇಳಿದಾಗ ಆತ ವೀಣಾರನ್ನು ಅವಾಚ್ಯ ಶಬ್ದಗಳಿಂದ ಬೈದು, ಕೊಲ್ಲುವುದಾಗಿ ಬೆದರಿಸಿ ಕೈಯಲ್ಲಿರುವ ಕತ್ತಿಯನ್ನು ವೀಣಾ ರವರ ಕಡೆಗೆ ಬೀಸಿದಾಗ ತಪ್ಪಿಸಿಕೊಳ್ಳಲು ವೀಣಾ ಪಕ್ಕದಲ್ಲಿದ್ದ ಚರಂಡಿಗೆ ಬಿದ್ದಿದ್ದಾರೆ. ಇದರಿಂದಾಗಿ ಅವರಿಗೆ ತೀವ್ರವಾದ ಗಾಯಗಳಾಗಿವೆ.
ವೀಣಾರವರು ಮೇಲಕ್ಕೇಳುವ ಸಂದರ್ಭದಲ್ಲಿ ಆರೋಪಿಯು ಆಕೆಯನ್ನು ಎಳೆದು ಮಾನಭಂಗಕ್ಕೆ ಯತ್ನಿಸಿರುವುದಾಗಿ ದೂರಿನಲ್ಲಿ ತಿಳಿಸಿರುತ್ತಾರೆ. ಗಾಯಗೊಂಡ ವೀಣಾರವರು ವಿಟ್ಲದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಬಗ್ಗೆ ವೀಣಾ ರವರು ಆರೋಪಿಯ ವಿರುದ್ಧ ನೀಡಿದ ದೂರಿನನ್ವಯ ವಿಟ್ಲ ಠಾಣಾ ಪೊಲೀಸರು ಕೇಸು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.