ವಿಟ್ಲ: ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಧ್ಯೇಯವನ್ನಿಟ್ಟುಕೊಂಡು, ಸತತ ಪರಿಶ್ರಮ, ಪ್ರಯತ್ನದ ಮೂಲಕ ಕಂಡ ಕನಸುಗಳನ್ನು ನನಸಾಗಿಸಿಕೊಳ್ಳಬೇಕು ಎಂದು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಸರಕಾರಿ ಪ್ರೌಢಶಾಲೆ ಮಾಣಿಲಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶಾಲಾ ಬೇಡಿಕೆಗಳುಳ್ಳ ಮನವಿಯನ್ನು ಮಾನ್ಯ ಶಾಸಕರಿಗೆ ನೀಡಲಾಯ್ತು. ಹಂತ ಹಂತವಾಗಿ ಶಾಲಾ ಅಗತ್ಯತೆಗಳನ್ನು ಪೂರೈಸುವುದಾಗಿ ಶಾಸಕರು ಹೇಳಿದರು. ಶಾಸಕರಿಗೆ ಶಾಲೆಯ ಪರವಾಗಿ ಶಾಲು ಹೊದಿಸಿ, ಪುಸ್ತಕ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯ್ತು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಮ್ .ಎಸ್ ಮಹಮ್ಮದ್, ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ವನಿತಾ, ಶಾಲಾ SDMC ಅಧ್ಯಕ್ಷ ಶಿವಪ್ರಸಾದ್ ಸೊರಂಪಳ್ಳ, SDMC ಸದಸ್ಯ ಹಾಗೂ ದಾನಿಗಳಾದ ಮುರುವ ನಡುಮನೆ ಮಹಾಬಲ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾಣಿಲ ಗ್ರಾಮ ಪಂಚಾಯತ್ ನ ಸದಸ್ಯರು, ಶಾಲಾ SDMC ಸದಸ್ಯರು, ಶಾಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರಭಾರ ಮುಖ್ಯ ಶಿಕ್ಷಕ ಭುವನೇಶ್ವರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ದೈಹಿಕ ಶಿಕ್ಷಕ ಉಮಾನಾಥ ರೈ ಕಾರ್ಯಕ್ರಮ ನಿರೂಪಿಸಿದರು.