ವಿಟ್ಲ: ಶ್ರೀ ದಿವ್ಯಜ್ಯೋತಿ ಮಿತ್ರ ವೃಂದ ಎರುಂಬು ಹಾಗೂ ಊರ ಹತ್ತು ಸಮಸ್ತರ ವತಿಯಿಂದ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ಪಾವಂಜೆ ಇವರಿಂದ ದಿನಾಂಕ 02.05.2021ರಂದು ನಡೆಯುವ ಯಕ್ಷಗಾನ ಬಯಲಾಟದ ಆಮಂತ್ರಣ ಬಿಡುಗಡೆ ಸಮಾರಂಭ ದಿನಾಂಕ 07.03.2021ನೇ ಭಾನುವಾರ ವಿಷ್ಣುಮಂಗಲ ದೇವಸ್ಥಾನದಲ್ಲಿ ಜರಗಿತು.
ಅರ್ಚಕರಾದ ಶ್ರೀ ಬಾಲಕೃಷ್ಣ ಕಾರಂತರ ಮಾರ್ಗದರ್ಶನದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ವಿಟ್ಲ ಅರಮನೆಯ ಪ್ರತಿನಿಧಿ ಶ್ರೀ ಕೃಷ್ಣಯ್ಯ ಕೆ ವಹಿಸಿ ಆಮಂತ್ರಣ ಬಿಡುಗಡೆ ಗೊಳಿಸಿದರು.ಸಾಮಾಜಿಕ ಕಾರ್ಯಕರ್ತ ಹಾಗೂ ಉದ್ಯಮಿ ಶ್ರೀ. ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ದಿ. ರಾಮಯ್ಯ ಬಲ್ಲಾಳರ ಸ್ಮರಣಾರ್ಥ ನಡೆಯುವ ಈ ಕಾರ್ಯಕ್ರಮ ಒಂದು ಮಾದರಿ ಸಮಾರಂಭ, ಅವರ ಆದರ್ಶ ಸದಾ ಅನುಸರಣೀಯ ಎಂದರು. ಬೇಂಗ್ರೋಡಿ ಗುತ್ತು ಶ್ರೀ ಬಾಲಕೃಷ್ಣ ಶೆಟ್ಟಿ ಅತಿಥಿಗಳಾಗಿ ದಿವ್ಯಜ್ಯೋತಿ ಮಿತ್ರ ವೃಂದದ ಬೆಳವಣಿಗೆಯಲ್ಲಿ ದಿವಂಗತ ರಾಮಯ್ಯ ಬಲ್ಲಾಳರ ಪಾತ್ರವನ್ನು ನೆನಪಿಸಿಕೊಂಡರು.
ಉಪಸ್ಥಿತರಿದ್ದ ಸಮಸ್ತರಿಗೆ ಮೇ 2 ರಂದು ಸಂಜೆ 6 ಗಂಟೆಗೆ ನಡೆಯುವ ಯಕ್ಷಗಾನ ಬಯಲಾಟ “ಶ್ರೀ ದೇವಿಮಹಾತ್ಮೆ” ಹಾಗೂ ದಿವ್ಯಜ್ಯೋತಿ ಮಿತ್ರವೃಂದದ ಹಿರಿಯ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮದ ಆಮಂತ್ರಣ ವಿತರಿಸಲಾಯಿತು ಹಾಗೂ ಸಹಕಾರವನ್ನು ಕೋರಲಾಯಿತು. ಶ್ರೀ ವಿಷ್ಣುಮಂಗಲ ದೇವರ ಸಂಕೀರ್ತನೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮದ ಪ್ರಾಸ್ತಾವಿಕ ಹಾಗೂ ಸ್ವಾಗತವನ್ನು ಅರ್ಚಕ ಬಾಲಕೃಷ್ಣ ಕಾರಂತರು ನೆರವೇರಿಸಿದರು. ರಾಧಾಕೃಷ್ಣ ಎರುಂಬು ನಿರ್ವಹಿಸಿ, ವಂದಿಸಿದರು. ಶ್ರೀ ವಿಷ್ಣುಮಂಗಲ ಸೇವಾ ಸಮಿತಿ, ಶ್ರೀ ಸುಜ್ಞಾನ ಮಹಿಳಾ ಮಂಡಳಿ ಸದಸ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.