ವಿಟ್ಲ: ಅಟೋರಿಕ್ಷಾದಲ್ಲಿ ಬಂದು ಸುಮಾರು ೨೦ಸಾವಿರ ಮೌಲ್ಯದ ೪೦ ಪಾರಿವಾಳಗಳನ್ನು ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ದೂರು ನೀಡಿ ೨೪ ಗಂಟೆಯಲ್ಲಿ ವಿಟ್ಲ ಪೊಲೀಸರ ತಂಡ ಬೇಧಿಸುವಲ್ಲಿ ಯಶಸ್ವಿಯಾಗಿದೆ.
ದೇರಳಕಟ್ಟೆ ಪನೀರ್ ಮೂಲದ ಕುಂಪಳ ಚಿತ್ರಾಂಜಲಿ ನಗರ ನಿವಾಸಿ ಮಹಮ್ಮದ್ ನಾಸಿರ್ ಯಾನೆ ನಾಸಿರ್ ಯಾನೆ ಕರಡಿ ನಾಸಿರ್ (೨೪), ಕಾವಲಕಟ್ಟೆ ಮೂಲದ ಪಾತ್ರತೋಟ ನಿವಾಸಿ ರಿಝ್ವಾನ್ (೧೯), ಬೋಳಂತೂರು ಮೂಲದ ಅಮ್ಟೂರು ನಿವಾಸಿ ಮಹಮ್ಮದ್ ಅಫೀಝ್ (೧೮) ಬಂಧಿತ ಆರೋಪಿಗಳಾಗಿದ್ದಾರೆ.
ಕೋಳಿ ಅಂಗಡಿಯಲ್ಲಿ ಕೆಲಸ ಮಾಡುವ ರಿಝ್ವಾನ್ ಹಾಗೂ ರಿಕ್ಷಾ ಚಾಲಕ ಕರಡಿ ನಾಸಿರ್ ಪತ್ನಿಯರು ಅಕ್ಕ ತಂಗಿಯರಾಗಿದ್ದು, ಒಕ್ಕೆತ್ತೂರು ಮೂಲೆ ಮನೆಯಲ್ಲಿ ಸುಲೈಯಾನೆ ಸುಲೈಮಾನ್ ಪಾರಿವಾಳ ಸಾಕುತ್ತಿರುವುದನ್ನು ಗಮನಿಸಿ, ಕಳ್ಳತನದ ಆಲೋಚನೆಯನ್ನು ನಡೆಸಿದ್ದರೆನ್ನಲಾಗಿದೆ.
ಜ.೨ರ ತಡ ರಾತ್ರಿ ೧ ಗಂಟೆ ಸುಮಾರಿಗೆ ರಿಕ್ಷಾದಲ್ಲಿ ಮೂವರು ಮನೆಯಂಗಳಕ್ಕೆ ಆಗಮಿಸಿ ಪಾರಿವಾಳದ ಗೂಡಿನ ಬೀಗ ಮುರಿದು ಕಳ್ಳತನ ಮಾಡಿ ರಿಕ್ಷಾದಲ್ಲಿ ಪಲಾಯನ ಮಾಡಿದ್ದರು. ಲೈಟ್ ಬೆಳಕಿನಲ್ಲಿ ಮುಖವನ್ನು ಗಮನಿಸಿದ್ದು, ಆರೋಪಿಗಳನ್ನು ಪತ್ತೆ ಹಚ್ಚಿಕೊಡಬೇಕಾಗಿ ಬುಧವಾರ ವಿಟ್ಲ ಠಾಣೆಗೆ ಸುಲೈ ದೂರು ನೀಡಿದ್ದರು. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಿಕ್ಷಾದಲ್ಲಿ ಪಾರಿವಾಳಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಮುಡಿಪ್ಪು ಕಡೆಯಿಂದ ಸಾಲೆತ್ತೂರು ಕಡೆ ಬರುತ್ತಿರುವ ಮಾಹಿತಿ ಹಿನ್ನಲೆಯಲ್ಲಿ ಸಾಲೆತ್ತೂರು ಕೊಡಂಗೆಯಲ್ಲಿ ವಿಟ್ಲ ಪೊಲೀಸರು ತನಿಖೆ ನಡೆಸುವ ಸಂದರ್ಭದಲ್ಲಿ ಆರೋಪಿಗಳು ಪತ್ತೆಯಾಗಿದ್ದಾರೆ. ರಟ್ಟಿನ ಪೆಟ್ಟಿಗೆಯಲ್ಲಿ ಸುಮಾರು ೨೨ ಪಾರಿವಾಳಗಳು ಲಭಿಸಿದ್ದು, ಕೃತ್ಯಕ್ಕೆ ಬಳಸಿದ ರಿಕ್ಷಾವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ರಿಝ್ವಾನ್ ಗೆಳೆಯ ಅಫೀಝ್ ಬೆಂಗಳೂರು ನಿಲಾದ್ರಿ ರಸ್ತೆಯ ಹೈಪರ್ ಮಾರ್ಕೆಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇತ್ತೀಚೆಗೆ ಮನೆಯಲ್ಲಿ ಕಾರ್ಯಕ್ರಮ ಇದ್ದ ಹಿನ್ನಲೆಯಲ್ಲಿ ಮನೆಗೆ ಆಗಮಿಸಿದ್ದ ಎನ್ನಲಾಗಿದೆ. ಕರಡಿ ನಾಸಿರ್ ಮೇಲೆ ಈಗಾಗಲೇ ಮುಡಿಪ್ಪಿವಿನ ಎರಡು ಕಡೆಯಲ್ಲಿ ರಾಬರಿ ನಡೆಸಿದ ಎರಡು ಪ್ರಕರಣ ಹಾಗೂ ಗಾಂಜಾ ಮಾರಾಟ ಮಾಡಿದ ಆರೋಪದಲ್ಲಿ ಕೊಣಾಜೆ ಠಾಣೆಯಲ್ಲಿ ಒಂದು ಪ್ರಕರಣವಿದೆ.
ಬಂಟ್ವಾಳ ಸಹಾಯಕ ಅಧೀಕ್ಷಕ ವೆಲೆಂಟನ್ ಡಿಸೋಜ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ಅವರ ನೇತೃತ್ವದಲ್ಲಿ ವಿಟ್ಲ ಠಾಣಾ ಉಪನಿರೀಕ್ಷಕ ವಿನೋದ್ ರೆಡ್ಡಿ, ಪ್ರೊಬೆಶನರಿ ಉಪನಿರೀಕ್ಷಕ ಕೃಷ್ಣಕಾಂತ್, ಸಿಬ್ಬಂದಿಗಳಾದ ಪ್ರಸನ್ನ, ಜಯಕುಮಾರ್, ಪ್ರತ್ತಾಪ, ವಿನಾಯಕ, ಹೇಮರಾಜ್ ಅವರ ತಂಡ ತ್ವರಿತ ಕಾರ್ಯಚರಣೆ
ನಡೆಸಿದೆ.