ವಿಟ್ಲ: ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಿಟ್ಲ ಎಸೈ ವಿನೋದ್ ಎಸ್. ಅವರ ನೇತೃತ್ವದ ತಂಡ ಪತ್ತೆ ಹಚ್ಚಿ ಸುಮಾರು ೪೫೦ ಗ್ರಾಂ ಗಾಂಜಾ ಸಹಿತ ಆರೋಪಿಯನ್ನು ಬಂಧಿಸಿದ ಘಟನೆ ವಿಟ್ಲ ಸಮೀಪದ ಬದನಾಜೆ ಬಸ್ಸು ನಿಲ್ದಾಣದ ಬಳಿ ಸೋಮವಾರ ನಡೆದಿದೆ.
ಕಬಕ ವಿದ್ಯಾಪುರ ನಿವಾಸಿ ಮಹಮ್ಮದ್ ಆಸೀಪ್ ಯಾನೆ ಆಚಿ (೩೦) ಬಂಧಿತ ಆರೋಪಿಯಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟ ಕಂಬಳಬೆಟ್ಟು ನಿವಾಸಿ ಹ್ಯಾರೀಸ್ ಯಾನೆ ಹೌಲಾ ಹ್ಯಾರೀಸ್ ತಲೆ ಮರೆಸಿಕೊಂಡಿದ್ದಾನೆ.
ವಿಟ್ಲ ಎಸೈ ವಿನೋದ್ ಸಿಬ್ಬಂದಿಗಳಾದ ಪ್ರಸನ್ನ ಕುಮಾರ್, ವಿನಾಯಕ, ಪ್ರತಾಪ್ ಕರ್ತವ್ಯದಲ್ಲಿದ್ದ ಸಂದರ್ಭ ಆಚಿ ಯಾನೆ ಆಸೀಫ್ ಮೋಟಾರು ಸೈಕಲ್ ನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಎಂಬ ಮಾಹಿತಿ ಹಿನ್ನಲೆಯಲ್ಲಿ ಆತನನ್ನು ವಿಚಾರಣೆ ನಡೆಸಿದ ಸಂದರ್ಭ ಕಂಬಳಬೆಟ್ಟು ಹೌಲಾ ಹ್ಯಾರೀಸ್ ಮನೆಯ ಬಳಿ ಇಟ್ಟ ಬಗ್ಗೆ ಹೇಳಿದ್ದು, ತಪಾಸನೆ ನಡೆಸಿದ ಸಂದರ್ಭ ಸುಮಾರು ೪೫೦ ಗ್ರಾಂ ಗಾಂಜಾ ಪತ್ತೆಯಾಗಿದೆ. ಮೋಟಾರ್ ಸೈಕಲ್ ಸಹಿತ ಸುಮಾರು ೫೯ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.