ವಿಟ್ಲ : ಅತ್ತಿಗೆಯ ಕೈ ಹಿಡಿದೆಳೆದು ಮಾನಭಂಗಕ್ಕೆ ಯತ್ನಿಸಿ ಕಿರುಕುಳ, ಜೀವಬೆದರಿಕೆ ನೀಡಿದ ಘಟನೆ ವೀರಕಂಬ ಗ್ರಾಮದ ಮೈರ ಎಂಬಲ್ಲಿ ನಡೆದಿದ್ದು ಆರೋಪಿಯ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೀರಕಂಬ ಗ್ರಾಮದ ಮೈರ ನಿವಾಸಿ ವಿಠಲ ಪೂಜಾರಿಯ ಪತ್ನಿ ಲೋಲಾಕ್ಷಿ(37) ದೂರು ನೀಡಿದ ಮಹಿಳೆಯಾಗಿದ್ದು ಪತಿಯ ದೊಡ್ಡಪ್ಪನ ಮಗ ಅದೇ ಪರಿಸರ ನಿವಾಸಿ ಜನಾರ್ದನ ಆರೋಪಿ.
ಪತಿ ವಿಠಲ ಪೂಜಾರಿಯವರು ಗುಡ್ಡಕ್ಕೆ ಸೊಪ್ಪು ತರಲು ಹೋಗಿದ್ದ ಸಂದರ್ಭ ಮನೆ ಕೆಲಸ ಮುಗಿಸಿ ಪತಿ ಕಡಿದಿಟ್ಟ ಸೊಪ್ಪು ತರಲು ಲೋಲಾಕ್ಷಿಯವರು ಹೋಗಿದ್ದರೆನ್ನಲಾಗಿದೆ. ಮರಳಿ ಬರುತ್ತಿದ್ದಾಗ ನಿರ್ಜನ ಪ್ರದೇಶದಲ್ಲಿ ಕಾದು ಕುಳಿತ ಆರೋಪಿ ಜನಾರ್ದನನು ಅತ್ತಿಗೆಯ ಕೈ ಹಿಡಿದು ಎಳೆದು ಇನ್ನೊಂದು ಕೈಯನ್ನು ಬಾಯಿಗೆ ಹಿಡಿದು ಮಾನಭಂಗಕ್ಕೆ ಯತ್ನಿಸಿದ್ದಾನೆ. ಆತನ ಹಿಡಿತದಿಂದ ಬಿಡಿಸಿಕೊಂಡು ಬೊಬ್ಬೆ ಹೊಡೆಯುತ್ತಿದ್ದಂತೆ “ನಾನು ಹೇಳಿದಂತೆ ನೀನು ಕೇಳದಿದ್ದರೆ ಕೊಲ್ಲುವುದಾಗಿ ಜೀವ ಬೆದರಿಕೆ” ಹಾಕಿ ಕಾಲ್ಕಿದ್ದಾನೆಂದು ಈ ಹಿಂದೆಯೇ ಸಂತ್ರಸ್ತೆ ಲೋಲಾಕ್ಷಿಯವರು ವಿಟ್ಲ ಠಾಣೆಗೆ ದೂರು ನೀಡಿದ್ದರು.
ಪೊಲೀಸರು ವಿಕೃತ ಆರೋಪಿ ಜನಾರ್ದನ ವಿರುದ್ಧ ವರ್ಷದ ಹಿಂದೆ ಎಫ್ಐಆರ್ ಹಾಕಿದ್ದರು. ನಂತರ ಆರೋಪಿ ಜನಾರ್ದನ ಜಾಮೀನು ಪಡೆದು ಕೇಸ್ ಬಂಟ್ವಾಳ ಕೋರ್ಟ್ನಲ್ಲಿ ನಡೆಯುತಿತ್ತು.
ಇದೀಗ ಮತ್ತೆ ಜನಾರ್ದನ ತನ್ನ ವಿಕೃತ ಚೇಷ್ಟೆ ಮುಂದುವರಿಸಿದ್ದನೆನ್ನಲಾಗಿದೆ. ನಿನ್ನೆ(ಗುರುವಾರ) ಮತ್ತೆ ಹಿಂದಿನಂತೆಯೇ ಲೋಲಾಕ್ಷಿಯವರ ಬೆನ್ನ ಹಿಂದೆ ಬಿದ್ದಿದ್ದು ಆತನ ಕಿರುಕುಳ, ಮಾನಸಿಕ ಹಿಂಸೆಯಿಂದ ಬಡ ಕುಟುಂಬದ ಲೋಲಾಕ್ಷಿಯವರು ಆತಂಕಕ್ಕೀಡಾಗಿದ್ದಾರೆ. ಜನಾರ್ದನನ ಕಿರುಕುಳ, ಮಾನಸಿಕ ಹಿಂಸೆ ಮತ್ತೆ ಮುಂದುವರಿದ ಕಾರಣ ಸಂತ್ರಸ್ತೆ ಲೋಲಾಕ್ಷಿಯವರು ಹಿರಿಯ ಪೊಲೀಸ್ ಅಧಿಕಾರಿಗಳಿಗೂ ಮನವಿ ನೀಡಿ ನ್ಯಾಯ ಬೇಡಿಧ್ದಾರೆ. ವಿಟ್ಲ ಪೊಲೀಸರು ಆರೋಪಿ ಜನಾರ್ದನನ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.