ಕನ್ನಡ ರಾಜ್ಯೋತ್ಸವದ ಅಂಗವಾಗಿ ನೀಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ವಿಟ್ಲದ ವ್ಯಕ್ತಿಯೂ ಭಾಜನಾರಗಿದ್ದಾರೆ. ಈ ಮೂಲಕ ವಿಟ್ಲದ ಹೆಸರನ್ನು ನಾಡಿನೆಲ್ಲೆಡೆ ಪಸರಿಸಿದ್ದಾರೆ. ವಿಟ್ಲದ ಚಂದಳಿಕೆಯ ವೀರಾಂಜನೇಯ ವ್ಯಾಯಾಮ ಶಾಲೆಯ ಸಂಸ್ಥಾಪಕರಾದ ದೇಜಪ್ಪ ಪೂಜಾರಿ ಎನ್ ಇವರ ಕಲಾ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ.
ಕಳೆದ ಸುಮಾರು 12 ವರ್ಷಗಳಿಂದ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದೆ ವೀರಾಂಜನೇಯ ವ್ಯಾಯಾಮ ಶಾಲೆ. ದೇಜಪ್ಪ ಪೂಜಾರಿ ಅವರು ದೇಶದ ಪುರಾತನ ಕತ್ತಿವರಸೆ, ತಾಲೀಮು ಕಲೆಯನ್ನು ಕಲಿತು ಅದನ್ನು ಬೆಳೆಸುವ ನಿಟ್ಟಿನಲ್ಲಿ ಚಂದಳಿಕೆಯಲ್ಲಿ ವೀರಾಂಜನೇಯ ವ್ಯಾಯಾಮ ಶಾಲೆಯನ್ನು ಹುಟ್ಟುಹಾಕಿ ನೂರಾರು ಮಂದಿಗೆ ಉಚಿತವಾಗಿ ಶಿಕ್ಷಣ ನೀಡಿಕೊಂಡು ಬಂದಿರುತ್ತಾರೆ.
ಇವರ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ. ತಂಡದಲ್ಲಿ ೬೦ಕ್ಕೂ ಮಿಕ್ಕಿ ಸಕ್ರಿಯ ಸದಸ್ಯರಿದ್ದು ಊರಿನ ಜಾತ್ರೆ, ಹಬ್ಬ ಹರಿದಿನ, ವಿಶೇಷ ಸಂದರ್ಭದಲ್ಲಿ ಅಮೋಘ ಪ್ರದರ್ಶನ ನೀಡಿಕೊಂಡು ಬರುತ್ತಿದೆ. ಇವರಿಂದ ಶಿಕ್ಷಣ ಪಡೆದವರು ಎರಡು ಸಲ ರಾಜ್ಯಮಟ್ಟದ ದೊಣ್ಣೆವರಸೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿ ಮಿಂಚಿದ್ದಾರೆ. ರಾಷ್ಟ್ರಮಟ್ಟದ ದೊಣ್ಣೆವರಸೆ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದ ಕೀರ್ತಿಯೂ ಇದೆ. ಒಟ್ಟಿನಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ವಿಟ್ಲಕ್ಕೆ ಮತ್ತೊಂದು ಗರಿಮೆಯಾಗಿದೆ.