ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಪ್ರಕರಣ






ವಿಟ್ಲ: ವ್ಯಕ್ತಿಯೋರ್ವರ ಸ್ವಾಧೀನದಲ್ಲಿರುವ ಜಾಗಕ್ಕೆ ನೆರೆಮನೆ ನಿವಾಸಿ ಅಕ್ರಮ ಪ್ರವೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ ಘಟನೆ ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಮೈ ಎಂಬಲ್ಲಿ ನಡೆದಿದೆ.
ರಾಮ ನಾಯ್ಕರವರು ಪರಿಶಿಷ್ಟ ಪಂಗಡ ಜಾತಿಗೆ ಸೇರಿದ್ದು, ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಮೈ ಎಂಬಲ್ಲಿ ಸರ್ವೆ ನಂಬ್ರ 289/2 ರಲ್ಲಿ ಸುಮಾರು 50 ಸೇಂಟ್ಸ್ ಸರಕಾರಿ ಭೂಮಿಯನ್ನು ಸ್ವಾಧೀನತೆಯಿಂದ ನಡೆಸುತ್ತಿದ್ದರು. ಸೆ. 28 ರಂದು ರಾಮ ನಾಯ್ಕರವರ ಸ್ವಾಧೀನದಲ್ಲಿರುವ ಜಾಗದಲ್ಲಿ ಅವರ ನೆರೆವಾಸಿ ಶಿವಪ್ರಸಾದ್ ಭಟ್ರವರ ಮನೆಯ ಕೆಲಸದಾಳು ಹಗಲು ವೇಳೆಯಲ್ಲಿ ಸೊಪ್ಪು ಕಡಿಯುವ ಕೆಲಸ ಮಾಡುತ್ತಿದ್ದುದನ್ನು ಗಮನಿಸಿದ ರಾಮ ನಾಯ್ಕರು ಅವರ ಮಗ ಭರತ್ ಕುಮಾರ್ರವರ ಮೂಲಕ ತುರ್ತು ಸೇವೆ 112 ಕರೆ ಮಾಡಿದ್ದು ಸ್ಥಳಕ್ಕೆ ಬಂದ ತುರ್ತು ಸ್ಪಂದನಾ ಪೊಲೀಸರು ಸಿವಿಲ್ ಪ್ರಕರಣವಾಗಿದ್ದು ಸಂಬಂಧಪಟ್ಟ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವಂತೆ ತಿಳಿಸಿ ಹೋಗಿರುತ್ತಾರೆ.
ಬಳಿಕ ಸಂಜೆ 4:30 ರ ಸುಮಾರಿಗೆ ಶಿವಪ್ರಸಾದ್ ಎಂಬತನು ರಾಮ ನಾಯ್ಕರ ಮನೆಯ ಬಳಿ ಬಂದು ಅವರ ಮನೆಯ ಪೋಟೋಗಳನ್ನು ತೆಗೆಯುತ್ತಿದ್ದುದನ್ನು ನೋಡಿ ಅವರನ್ನು ಪ್ರಶ್ನಿಸಿದಾಗ ಶಿವ ಪ್ರಸಾದ್ ಭಟ್ರವರು ರಾಮ ನಾಯ್ಕರನ್ನು ಉದ್ದೇಶಿಸಿ ನನ್ನ ಜಾಗದಲ್ಲಿ ಕೆಲಸ ಮಾಡಿದರೆ ನಿನಗೆ ಏನು ಸಮಸ್ಯೆ ಎಂದು ಹೇಳಿ, ಅವಾಚ್ಯ ಶಬ್ದಗಳಿಂದ ಬೈದುದಲ್ಲದೆ ಹೊಲಸು ಮಾಂಸ ತಿನ್ನುವ ನಾಯ್ಕ ನೀನು ನಿನ್ನಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ಜಾತಿ ನಿಂದನೆ ಮಾಡಿದ್ದಲ್ಲದೆ ಇನ್ನು ಮುಂದಕ್ಕೆ ದೂರು ನೀಡಿದರೆ ನಿನ್ನನ್ನು ಮತ್ತು ನಿನ್ನ ಮನೆಯವರನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಮಾಂಸ ತಿನ್ನುವ ಜಾತಿಯವರನ್ನು ಯಾವುದೇ ಕಾರಣಕ್ಕೂ ಇಲ್ಲಿ ಇರಲು ಬಿಡುವುದಿಲ್ಲ ಎಂದು ಹೇಳಿ ಹೋಗಿರುತ್ತಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (bns) 2023 (U/s-352,351(2)); ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು (ದೌರ್ಜನ್ಯ ತಡೆ) ತಿದ್ದುಪಡಿ ಮಸೂದೆ, 2015 (U/s-3(1)(r),3(1)(s),3(2)(va)) ರಂತೆ ಪ್ರಕರಣ ದಾಖಲಾಗಿದೆ.