ವಿಟ್ಲ: ವಿಟ್ಲ ಹೋಬಳಿಯಲ್ಲಿ ಎಲ್ಲ ಸೌಲಭ್ಯವಿರಬೇಕಾದ ನಾಡ ಕಚೇರಿ ಸಮಸ್ಯೆಗಳ ಆಗರವಾಗಿ ಪರಿವರ್ತನೆಯಾಗಿದೆ. ಸದಾ ಒಂದಲ್ಲ ಒಂದು ತೊಂದರೆಯಿAದಾಗಿ ಮುಚ್ಚುವ ಹಂತಕ್ಕೆ ಬಂದು ತಲುಪಿದೆ.
ವಿಟ್ಲ ಹೋಬಳೀಯಲ್ಲಿ ಉಪತಹಶೀಲ್ದಾರ್ ಇಲ್ಲ. ಕಟ್ಟಡವೂ ಸುರಕ್ಷಿತವಾಗಿಲ್ಲ. ಮಳೆಗಾಲದಲ್ಲಂತೂ ಕೇಳೋದೇ ಬೇಡ. ಒಳಗಡೆ ಮಳೆನೀರು ಬೀಳುತ್ತದೆ. ಇದರಿಂದಾಗಿ ಇಲ್ಲಿರುವ ಕಂಪ್ಯೂಟರ್ ಇತರ ಉಪಕರಣಗಳಿಗೂ ತೊಂದರೆ ಕಟ್ಟಿಟ್ಟ ಬುತ್ತಿ.
ಕಡತಗಳನ್ನು ಸರಿಯಾಗಿ ಇಡಲು ವ್ಯವಸ್ಥೆಯಿಲ್ಲದೆ ಗೆದ್ದಲು ತುಂಬಿ ಸರ್ವನಾಶವಾಗುತ್ತಿದೆ. ಆದರೆ ಕಂದಾಯ ಇಲಾಖೆಯ ಈ ಶೋಚನೀಯ ಸ್ಥಿತಿ ಸರ್ಕಾರದ ಕಣ್ಣಿಗೆ ಮಾತ್ರ ಕಾಣುತ್ತಿಲ್ಲ.
ಬಂಟ್ವಾಳ ತಾಲೂಕಿನ ಮೂರು ಹೋಬಳಿಗಳಲ್ಲಿ ವಿಟ್ಲ ಹೋಬಳಿ ದೊಡ್ಡದು. ಆದುದರಿಂದ ತಾಲೂಕು ಆಗಬೇಕೆಂಬ ಕೂಗು ಹಿಂದಿನಿAದಲೇ ಇತ್ತು. ವಿಟ್ಲ ವಿಧಾನಸಭಾ ಕ್ಷೇತ್ರ ಮಾಯವಾದ ಬಳಿಕ ತಾಲೂಕು ಆಗುವ ಕನಸು ನುಚ್ಚು ನೂರಾಯಿತು. ಹಲವು ವರ್ಷಗಳ ಬಳಿಕ ವಿಟ್ಲ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಬಿಟ್ಟಿತು ಎಂಬ ಸಮಾಧಾನವಿತ್ತು. ಆದರೆ ಪಟ್ಟಣ ಪಂಚಾಯತ್ ಆದ ಬಳಿಕವೂ ಕಂದಾಯ ಇಲಾಖೆ, ನಾಡಕಚೇರಿಗೆ ಎಳ್ಳಷ್ಟು ಉಪಯೋಗವಾಗಲಿಲ್ಲ. ತಾಲೂಕು ಪಂಚಾಯತ್ ಕಟ್ಟಡದಲ್ಲಿ ನಾಡಕಚೇರಿ ಕಾರ್ಯನಿರ್ವಹಿಸುತ್ತದೆ. ಇಲ್ಲಿ ಉಪತಹಶೀಲ್ದಾರ್ ಇರಬೇಕು. ಆದರೆ ಈಗ ಹುದ್ದೆ ಖಾಲಿಯಾಗಿದೆ. ಆರ್.ಐ. ಅವರು ಈ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಜತೆಗೆ ಮೂವರು ಸಿಬಂದಿ ಕರ್ತವ್ಯ ನಿರ್ವಹಿಸುತ್ತಾರೆ.
ಇಲ್ಲೇ ನೆಮ್ಮದಿ ಕೇಂದ್ರವಿದ್ದು ಎಷ್ಟೋ ವರ್ಷಗಳಿಂದ ಸರ್ವರ್ ಸಮಸ್ಯೆಗಳಿಂದ ಪರದಾಡುತ್ತಿರುವ ಈ ಕೇಂದ್ರಕ್ಕೆ ವಿದ್ಯುತ್ ಕಡಿತವೂ ಸೇರಿಕೊಂಡು ಸಮಸ್ಯೆಗಳು ದುಪ್ಪಟ್ಟಾಗಿವೆ. ವಿಟ್ಲದಲ್ಲಿ ವಿದ್ಯುತ್ ಕಡಿತವಾದಲ್ಲಿ ಈ ಕೇಂದ್ರದಲ್ಲಿ ಯಾವ ಕೆಲಸವೂ ಆಗುವುದಿಲ್ಲ. ಇನ್ವರ್ಟರ್ ಯುಪಿಎಸ್ ಇಲ್ಲದ ಕಾರಣ ವಿದ್ಯುತ್ ಕಡಿತವಾದ್ರೆ ಆ ದಿನ ನೆಮ್ಮದಿ ಕೇಂದ್ರ ಕಾರ್ಯನಿರ್ವಹಿಸುವುದಿಲ್ಲ.
ಒಟ್ಟಿನಲ್ಲಿ ಜನರಿಗೆ ಉಪಯೋಗವಾಗಬೇಕಾದ ಈ ನೆಮ್ಮದಿ ಕೇಂದ್ರಕ್ಕೆ ನೆಮ್ಮದಿ ಇಲ್ಲದಂತಾಗಿದೆ. ಹಲವು ಸಮಸ್ಯೆಗಳ ಆಗರವಾಗಿರುವ ಈ ನಾಡಕಛೇರಿ ಹಾಗೂ ನೆಮ್ಮದಿ ಕೇಂದ್ರದ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕಾದ ಅನಿವಾರ್ಯತೆ ಬಹಳಷ್ಟಿದೆ.