ಬೆಂಗಳೂರು: ಕೊರೊನಾ ಕಾಲದಲ್ಲಿ ಇಂದು ಎರಡನೇ ಅಧಿವೇಶನ ಎದುರಿಸಲು ಸರ್ಕಾರ ಸಿದ್ಧವಾಗಿದೆ. ಉಪಚುನಾವಣೆ ಗೆದ್ದ ಹುಮ್ಮಸ್ಸಿನಲ್ಲಿರುವ ಬಿಜೆಪಿಯು ಪ್ರತಿಪಕ್ಷಗಳನ್ನು ಎದುರಿಸಲು ಪ್ರತ್ಯಸ್ತ್ರಗಳನ್ನ ಸಿದ್ಧಪಡಿಸಿಕೊಂಡಿದೆ. ಬೆಳಗಾವಿಯಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿರುವ ಬಿಜೆಪಿ, ಪ್ರಮುಖವಾಗಿ ಎರಡು ಮಸೂದೆಗಳ ಮಂಡನೆಗೆ ಮುಂದಾಗಿದೆ.
ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಮುಗಿಬೀಳಲು ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಸನ್ನದ್ಧವಾಗಿವೆ. ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ನಿವಾಸದಲ್ಲಿ ಎರಡು ಸದನಗಳ ಸದಸ್ಯರ ಸಭೆ ಕರೆದು ಹೋರಾಟದ ರೂಪುರೇಷೆಗಳನ್ನ ಸಿದ್ಧಮಾಡಿಕೊಂಡಿದ್ದಾರೆ. ಇನ್ನು, ಜೆಡಿಎಸ್ ಕೂಡಾ ಇಂದು ಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ ಕರೆದಿದೆ.
ಅಧಿವೇಶನದಲ್ಲಿ ಈ ಬಾರಿ ಸರ್ಕಾರ ಲವ್ ಜಿಹಾದ್, ಗೋಹತ್ಯೆ ನಿಷೇಧ ವಿಧೇಯಕ ಮಂಡನೆಗೆ ಮುಂದಾಗಿದ್ದು, ಇದನ್ನೇ ವಿಪಕ್ಷಗಳು ಗುರಿಯಾಗಿಸೋ ಸಾಧ್ಯತೆ ಇದೆ. ಇನ್ನು, ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಸೂಚನೆ ನೀಡಿದ್ದು, ಸರ್ಕಾರದ ವಿಳಂಬ ಧೋರಣೆಯೂ ಸದನದಲ್ಲಿ ಪ್ರತಿಧ್ವನಿಸೋ ಸಾಧ್ಯತೆ ಇದೆ. ಈ ಮಧ್ಯೆ ತೇರದಾಳ ಬಿಜೆಪಿ ಶಾಸಕ ಸಿದ್ದು ಸವದಿ ಪ್ರಕರಣ, ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ಹಂಚಿಕೆಯ ಬಗ್ಗೆಯೂ ವಿಪಕ್ಷಗಳು ಪ್ರಸ್ತಾಪಿಸಲಿವೆ.
ಇದಿಂನಿಂದ ಆರಂಭಗೊಳ್ಳಲಿರುವ ಚಳಿಗಾಲದ ಅಧಿವೇಶನ ಡಿಸೆಂಬರ್ 15ರ ವರೆಗೆ ಒಟ್ಟು ಏಳು ದಿನಗಳ ಕಾಲ ನಡೆಯಲಿದೆ.