ಅಳಿಕೆ:-“ಕರ್ಮಣ್ಯೇ ವಾಧಿಕಾರಸ್ತೆ ಮಾ ಫಲೇಷು ಕದಾಚನ ” ತನ್ನದೆನ್ನುವುದು ಏನೂ ಇಲ್ಲದೆ ತನಗಾಗಿ ಏನನ್ನೂ ಮಾಡದೆ ಜಾತಿ, ಮತ, ಪಂಥ, ಬಡವ, ಬಲ್ಲಿದ, ಪಂಡಿತ, ಪಾಮರ ಎನ್ನುವ ಯಾವುದೇ ಭೇದವಿಲ್ಲದೆ ಎಲ್ಲರನ್ನು ತನ್ನವರೆಂದು ತಿಳಿದು “ಸ್ವಾಮಿ ಇಚ್ಛೆಯಂತೆ ತನ್ನ ಬದುಕು” ಎಂದು ಪ್ರಾಮಾಣಿಕವಾಗಿ ನಂಬಿ ಬದುಕಿದವರು ಆಳಿಕೆಯ ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಸಂಮಾನ್ಯ ಉಳುವಾನ ಗಂಗಾಧರ ಭಟ್ ಅವರು.
ಪೂರ್ಣಾಯುಷ್ಯದ ಸಾರ್ಥಕ ಬದುಕನ್ನು ಬದುಕಿ, ಕಾಲನ ಕರೆಗೆ ಓಗೊಟ್ಟು ದಿನಾಂಕ 27.08.2020ರಂದು ನಮ್ಮನ್ನಗಲಿದ ಸನ್ಮಾನ್ಯರಿಗೆ ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮವು ಎರುಂಬು ಶ್ರೀ ದಿವ್ಯಜ್ಯೋತಿ ಮಿತ್ರ ವೃಂದದ ವತಿಯಿಂದ ದಿನಾಂಕ 06.09.2020ರಂದು ವಿಷ್ಣುಮಂಗಲ ದೇವಸ್ಥಾನದಲ್ಲಿ ಊರ ಹತ್ತು ಸಮಸ್ತರ ಜೊತೆಗೂಡಿ ನಡೆಸಲಾಯಿತು. ಉಪಸ್ಥಿತರಿದ್ದ ಎಲ್ಲರೂ ಸನ್ಮಾನ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ, ಮೌನ ಪ್ರಾರ್ಥನೆ ಹಾಗೂ ಶಾಂತಿ ಮಂತ್ರದೊಂದಿಗೆ ಅಗಲಿದ ದಿವ್ಯಾತ್ಮಕ್ಕೆ ನಮಿಸಿ ಪ್ರಾರ್ಥಿಸಿದರು.
ದೇಗುಲದ ಅರ್ಚಕರು , ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಾಲಕೃಷ್ಣ ಕಾರಂತ ಎರುಂಬು ನುಡಿನಮನ ಸಲ್ಲಿಸಿದರು. ಶಕ್ತಿ ಕೇಂದ್ರದ ಗ್ರಾಮ ಸಮಿತಿ ಅಧ್ಯಕ್ಷರು ಶ್ರೀ ಸದಾನಂದ ಶೆಟ್ಟಿ ಯವರು ಪೂಜ್ಯ ಗಂಗಾಧರಣ್ಣನವರ ಲೋಕಸೇವಾ ಮನೋಭಾವವನ್ನು ನೆನಪಿಸಿದರು. ಹಿರಿಯ ಸಮಾಜ ಸೇವಕರಾದ ವಸಂತ ಕುಲಾಲ್ ಉಪಸ್ಥಿತರಿದ್ದರು. ರಾಧಾಕೃಷ್ಣ ಎರುಂಬು ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.