ಕೇಂದ್ರ ಸರಕಾರದ ಬಜೆಟ್ ನಲ್ಲಿ ಕರ್ನಾಟಕಕ್ಕೂ ದೊಡ್ಡ ಪಾಲು ಸಿಕ್ಕಿದೆ. ಬರಗಾಲ ಪೀಡಿತ ಪ್ರದೇಶಗಳಿಗೆ ನೀರಾವರಿ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ನಿರ್ಮಲಾ ಸೀತಾರಾಮನ್ ₹ 5,300 ಕೋಟಿ ಅನುದಾನ ಘೋಷಿಸಿದರು. ಈ ವೇಳೆ ಪ್ರತಿಪಕ್ಷಗಳಿಂದ ಉದ್ಗಾರ ತೇಲಿಬಂತು.
ಕೃಷಿಸಾಲದ ಗುರಿ ₹ 20 ಲಕ್ಷ ಕೋಟಿಗೆ ಹೆಚ್ಚಳ,
ಗ್ರಾಮೀಣ ಆರ್ಥಿಕತೆಯ ಬಗ್ಗೆ ಈ ಬಾರಿಯ ಬಜೆಟ್ ವಿಶೇಷ ಗಮನ ನೀಡಿದೆ. ಪಶುಸಂಗೋಪನೆ, ಡೈರಿ ಮತ್ತು ಮೀನುಗಾರಿಕೆಯನ್ನೂ ಒಳಗೊಂಡಂತೆ ಕೃಷಿಸಾಲಕ್ಕಾಗಿ ₹ 20 ಲಕ್ಷ ಕೋಟಿ ಮೀಸಲಿಡಲಾಗಿದೆ. ಕೃಷಿ ನವೋದ್ದಿಮೆಗಳನ್ನು ಸ್ಥಾಪಿಸುವುದಕ್ಕೆ ಯುವ ಉದ್ಯಮಿಗಳಿಗೆ ಸಹಕರಿಸಲು ಕೃಷಿ ವೇಗವರ್ಧಕ ನಿಧಿ ಹಾಗೂ ರಾಗಿ ಸೇರಿದಂತೆ ಸಿರಿಧಾನ್ಯಗಳ ಬೆಳೆ ಪದ್ಧತಿ ಸುಧಾರಣೆಗಾಗಿ ಸಂಶೋಧನೆ ನಡೆಸಲು ಹಾಗೂ ಉತ್ತಮ ಬೆಳೆ ಪದ್ಧತಿಯ ದಾಖಲಾತಿಗಾಗಿ ‘ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಮಿಲೆಟ್ ರೀಸರ್ಚ್’ ಸಂಸ್ಥೆಗೆ ಅಗತ್ಯ ನೆರವು ಒದಗಿಸಲಾಗುವುದು. ಎಂದು ನಿರ್ಮಾಲ ಸೀತಾರಾಮನ್ ಹೇಳಿದ್ದಾರೆ.
ಮೀನುಗಾರರು, ಕರಕುಶಲಕರ್ಮಿಗಳಿಗೆ ಉತ್ತೇಜನ
ಪಿಎಂ ಮತ್ಸ್ಯ ಸಂಪದ ಯೋಜನೆಯಡಿ ₹ 6,000 ಕೋಟಿ ಮೊತ್ತದ ಅನುದಾನವನ್ನು ಮೀನುಗಾರಿಕೆಯ ಉತ್ತೇಜನಕ್ಕೆ ಮೀಸಲಿಡಲಾಗುವುದು. ಪಿಎಂ ವಿಶ್ವಕರ್ಮ ಕೌಶಲ್ಯ ಸನ್ಮಾನ್ ಯೋಜನೆಯಡಿ ಪಾರಂಪರಿಕ ಕರಕುಶಲಕರ್ಮಿಗಳಿಗೆ ನೆರವಾಗಲು ಕಾರ್ಯಕ್ರಮ ರೂಪಿಸಲಾಗುವುದು. ಸಣ್ಣ ಉದ್ದಿಮೆಗಳ ಅಭಿವೃದ್ಧಿಗೆ ರೂಪಿಸಿರುವ ಕಾರ್ಯಕ್ರಮಗಳೊಂದಿಗೆ ಇವರನ್ನು ಜೋಡಿಸಿ, ಕುಶಲಕರ್ಮಿಗಳ ಅರ್ಥಿಕ ಸ್ಥಿತಿಗತಿ ಸುಧಾರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಗರೀಬ್ ಕಲ್ಯಾಣ್ ಯೋಜನೆ; ಒಂದು ವರ್ಷ ಉಚಿತ ಆಹಾರ
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅನ್ವಯ ಬಡವರಿಗೆ ಇನ್ನೂ ಒಂದು ವರ್ಷ ಉಚಿತ ಆಹಾರ ನೀಡಲಾಗುವುದು ಎಂದು ನಿರ್ಮಾಲಾ ಸೀತರಾಮನ್ ಹೇಳಿದ್ದಾರೆ. ಹಾಗೂ ಬಡವರ ಪರವಾದ ಬಜೆಟ್ ಇದಾಗಿದ್ದು, ಕೋವಿಡ್ ಸಮಯದಲ್ಲಿಯೂ ಸರ್ಕಾರ ಬಡವರನ್ನು ಕೈಬಿಟ್ಟಿಲ್ಲ. ಯಾರಿಗೂ ಆಹಾರದ ಕೊರತೆಯಾಗದಂತೆ ನೋಡಿಕೊಂಡಿದೆ ಎಂದು ತಿಳಿಸಿದರು.
ಆರೋಗ್ಯ ಕ್ಷೇತ್ರಕ್ಕೆ ಹೊಸ ಬಲ
ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಸಚಿವರು ಹಲವು ಹೊಸ ಕ್ರಮಗಳನ್ನು ಘೋಷಿಸಿದರು. 2015ರಿಂದ ಆರಂಭವಾಗಿರುವ ಹೊಸ ಮೆಡಿಕಲ್ ಕಾಲೇಜುಗಳಿಗೆ ಹತ್ತಿರದಲ್ಲಿಯೇ ಹೊಸದಾಗಿ 157 ನರ್ಸಿಂಗ್ ಕಾಲೇಜುಗಳನ್ನು ಆರಂಭಿಸಲಾಗುವುದು. ಸಿಕಲ್ ಸೆಲ್ ಅನಿಮಿಯಾ ಕಾಯಿಲೆಯನ್ನು 2047ರ ಒಳಗೆ ನಿರ್ಮೂಲನೆ ಮಾಡಲಾಗುವುದು. ಐಸಿಎಂಆರ್ ಲ್ಯಾಬ್ಗಳನ್ನು ಸಾರ್ವಜನಿಕ ಮತ್ತು ಖಾಸಗಿ ವೈದ್ಯಕೀಯ ಸಂಶೋಧನೆಗೆ ಒದಗಿಸಲಾಗುವುದು. ಔಷಧ ವಿಜ್ಞಾನದಲ್ಲಿ ಸಂಶೋಧನೆಗೆ ಉತ್ತೇಜನ ನೀಡಲು ಹೊಸ ಕಾರ್ಯಕ್ರಮ ರೂಪಿಸಲಾಗುವುದು ಎಂದು ಸಚಿವರು ಘೋಷಿಸಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆ
ಪ್ರಧಾನಮಂತ್ರಿ ಆವಾಸ್ ಯೋಜನೆ ವೆಚ್ಚ 66% ರಷ್ಟು ಏರಿಕೆ ಮಾಡಲಾಗಿದ್ದು, ವೆಚ್ಚವನ್ನು 79,000 ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಶಿಕ್ಷಣ
ಶಿಕ್ಷಣಕ್ಕೆ ಸಾಕಷ್ಟು ಒತ್ತು ನೀಡುವ ಬಜೆಟ್ ಇದಾಗಿದ್ದು, ಗಿರಿಜನ ವಸತಿ ಶಾಲೆಗಳಿಗಾಗಿ 38,000 ಸಾವಿರ ಶಿಕ್ಷಕರ ನೇಮಕ ಹಾಗೂ ಮುಂದಿನ ಮೂರು ವರ್ಷದಲ್ಲಿ ದೇಶಾದ್ಯಂತ ಗಿರಿಜನರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಏಕಲವ್ಯ ಮಾದರಿ ಶಾಲೆಗಳನ್ನು ಸ್ಥಾಪಿಸಲಾಗುವುದು ಎಂದು ವಿತ್ತ ಸಚಿವೆ ತಿಳಿಸಿದ್ದಾರೆ.
ತಂತ್ರಜ್ಞಾನ
ಕೃತಕ ಬುದ್ಧಿಮತ್ತೆಯ ಸಂಶೋಧನೆ ಮತ್ತು ಅಧ್ಯಯನಕ್ಕೆ 3 ಕೇಂದ್ರಗಳನ್ನು ಸ್ಥಾಪಿಸುವುದು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೂರು ಶ್ರೇಷ್ಠತೆಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೇಂದ್ರಗಳಮ್ಮು ಸ್ಥಾಪಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೌಶಲ್ಯ ಅಭಿವೃದ್ಧಿ
ದೇಶದಲ್ಲಿ ಯುವಕರಿಗೆ ಅಂತರಾಷ್ಟ್ರೀಯ ಮಟ್ಟದ ಕೌಶಲ್ಯ ನೀಡಲು ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ 4.0 ಅನ್ನು ಪ್ರಾರಂಭ ಹಾಗೂ ವಿವಿಧ ರಾಜ್ಯಗಳಲ್ಲಿ 30 ಸ್ಕಿಲ್ ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ಗಳನ್ನು ಸ್ಥಾಪಿಸಲಾಗುವುದು ಎಂದು ವಿತ್ತ ಸಚಿವೆ ಹೇಳಿದ್ದಾರೆ.
ಚಿನ್ನಾಭರಣಗಳ ಬೆಲೆ ದುಬಾರಿ
2023-24ನೇ ಸಾಲಿನ ಚಿನ್ನಾಭರಣಗಳು ಬೆಲೆ ದುಬಾರಿಯಾಗಲಿದ್ದು, ಬಂಗಾರ, ಬೆಳ್ಳಿ, ವಜ್ರ, ಪ್ಲಾಟಿನಂ ಬೆಲೆ ದುಬಾರಿಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇನ್ನು ವಿದೇಶೀ ವಾಹನಗಳ ಆಮದು ಶುಲ್ಕವೂ ದುಬಾರಿಯಾಗಲಿದೆ. ಅಲ್ಲದೆ ರೆಡಿಮೇಟ್ ಬಟ್ಟೆ ಬೆಲೆ ಏರಿಕೆಯಾಗಲಿದೆ ಎಂದೂ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ.
ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿಗಳ ಬೆಲೆ ಇಳಿಕೆಯಾಗಲಿದೆ. ಮೊಬೈಲ್ ಫೋನ್, ಕ್ಯಾಮರಾ ಲೆನ್ಸ್ ಆಮದು ಸುಂಕ ರದ್ದುಗೊಳ್ಳಲಿದ್ದು, ಮೊಬೈಲ್, ಕ್ಯಾಮರಾ ಲೆನ್ಸ್, ಟಿವಿ ಬೆಲೆ ಇಳಿಕೆಯಾಗಲಿದೆ. ಲಿಥೀಯಂ ಬ್ಯಾಟರಿ ಮೇಲಿನ ಸುಂಕ ಕಡಿತಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರಕಾರದ ಈ ಬಜೆಟ್ನಲ್ಲಿ ರಾಜ್ಯದ ಪ್ರಮುಖ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಕರ್ನಾಟಕದ ಸಮಸ್ತ ಜನರ ಪರವಾಗಿ ಧನ್ಯವಾದಗಳು ಎಂದು ಬೊಮ್ಮಾಯಿ ತಿಳಿಸಿದರು.