ಚಿಕ್ಕಮಗಳೂರು: ಅಕ್ರಮವಾಗಿ ಹುಲಿ ಉಗುರನ್ನು ಮಾರಾಟ ಮಾಡುತ್ತಿದ್ದ ಓರ್ವನನ್ನು ಚಿಕ್ಕಮಗಳೂರು ಅರಣ್ಯ ಇಲಾಖೆ ಬಂಧನ ಮಾಡಿದೆ. ಚಿಕ್ಕಮಗಳೂರು ನಗರದಲ್ಲಿ ಸಕ್ರಿಯವಾಗಿ ಹುಲಿ ಉಗುರು ಮಾರಾಟ ಮಾಡುತ್ತಿದ್ದ ಜಾಲವನ್ನು ಅರಣ್ಯ ಇಲಾಖೆಯ ಸಂಚಾರಿ ವಲಯ ಅರಣ್ಯ ಅಧಿಕಾರಿಗಳ ತಂಡ ಯಶಸ್ವಿಯಾಗಿ ಪತ್ತೆಮಾಡಿದೆ.
ಹುಲಿ ಉಗುರು ಮಾರಾಟ ಮಾಡಲು ಯತ್ನಿಸುತ್ತಿದ್ದ ಕಲ್ಲದೊಡ್ಡಿಯ ಇಂದ್ರ ನಗರವಾಸಿ ಶೇಖರ್ ಎಂಬ ವ್ಯಕ್ತಿಯನ್ನು ಹಿರೇಕೊಳಲೆ ರಸ್ತೆಯಲ್ಲಿ ಬಂಧಿಸಿದ ಪೊಲೀಸರು ಎರಡು ಹುಲಿ ಉಗುರು ಹಾಗೂ ಒಂದು ಮೊಬೈಲ್ ಫೋನನ್ನು ವಶಪಡಿಸಿಕೊಂಡಿದ್ದಾರೆ.
ಹುಲಿ ಉಗುರನ್ನು ಮಾರಾಟ ಮಾಡಲು ಹೇಳಿದ್ದ ಹುಕ್ಕುಂದ ಗ್ರಾಮದ ಸುಂದರ ಎಂಬ ವ್ಯಕ್ತಿಯು ತಲೆಮರೆಸಿಕೊಂಡಿದ್ದಾನೆ ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಮುಕುಂದ ಗ್ರಾಮದ ಕಾಫಿ ತೋಟವೊಂದರಲ್ಲಿ ಹುಲಿಗಾಗಿ ಉರುಳು ಹಾಕಿ ಹುಲಿಯನ್ನು ಕೊಂದು ಅದರ ಎರಡು ಉಗುರನ್ನು ಶೇಖರನು ಮಾರಾಟ ಮಾಡಲು ಮುಂದಾಗಿದ್ದ ಎಂಬ ಮಾಹಿತಿಯು ಸಹ ದೊರೆತಿದೆ. ಈ ಪ್ರಕರಣದ ಇನ್ನೋರ್ವ ಆರೋಪಿ ಸುಂದರನು ತಲೆಮರೆಸಿಕೊಂಡಿರುವುದರಿಂದ ಆತನ ಪತ್ತೆಯ ನಂತರ ಮುಂದಿನ ವಿಚಾರಗಳು ಸ್ಪಷ್ಟವಾಗಲಿದೆ ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.