ಪುತ್ತೂರು: ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ಉದ್ಯೋಗಿಗಳ ರಿಕ್ರಿಯೇಷನ್ ಸೆಂಟರ್ ವತಿಯಿಂದ ಕ್ಯಾಂಪ್ಕೋ ಉದ್ಯೋಗಿಗಳ ಕುಟುಂಬ ಮಿಲನ್ ಕಾರ್ಯಕ್ರಮವು ಕ್ಯಾಂಪ್ಕೋ ರಿಕ್ರಿಯೇಷನ್ ಸೆಂಟರಿನ ವಸತಿ ನಿಲಯದ ಸಭಾಂಗಣದಲ್ಲಿ ನಡೆಯಿತು. ಕುಟುಂಬ ಮಿಲನ್ ಕಾರ್ಯಕ್ರಮದ ಉದ್ಘಾಟನೆಯನ್ನು ಸು.ರಾಮಣ್ಣನವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು.
ಕುಟುಂಬ ಮಿಲನ್ ಕಾರ್ಯಕ್ರಮಕ್ಕೆ ಮಾರ್ಗದರ್ಶಕರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಸು. ರಾಮಣ್ಣನವರು ಉಪಸ್ಥಿತರಿದ್ದರು. ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆ ಉದ್ಯೋಗಿಗಳ ರಿಕ್ರಿಯೇಷನ್ ಸೆಂಟರಿನ ಕಾರ್ಯದರ್ಶಿ ಶ್ರೀ ರಮೇಶ ನೆಗಳಗುಳಿ ಅವರು ಪ್ರಸ್ಥಾವಿಕ ಮಾತನ್ನಾಡಿ ಕ್ಯಾಂಪ್ಕೋ ಕುಟುಂಬವು ಚೆನ್ನಾಗಿ ನೆಮ್ಮದಿಯಿಂದ ಇದ್ದರೆ ಕ್ಯಾಂಪ್ಕೋ ಉದ್ಯೋಗಿಗಳಿಗೆ ಸಂಸ್ಥೆಯಲ್ಲಿ ಚೆನ್ನಾಗಿ ಕೆಲಸ ನಿರ್ವಹಿಸಲು ಸಾಧ್ಯ, ನಮ್ಮಮನೆ ಯಾವ ರೀತಿ ಇರಬೇಕು ಎಂಬುದರ ಬಗ್ಗೆ ಮಾರ್ಗದರ್ಶನವನ್ನು ಪಡೆಯಲು ನಾವು ಕ್ಯಾಂಪ್ಕೋ ಕುಟುಂಬ ಮಿಲನ್ ಕಾರ್ಯಕ್ರಮದಲ್ಲಿ ಸೇರಿದ್ದೇವೆ ಎಂದು ತಿಳಿಸಿದರು.
ನಮ್ಮ ಮನೆ ಹಾಡನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಕುಟುಂಬ ಪ್ರಬೋಧನ ಸಂಯೋಜಕ ಗಜಾನನ ಪೈ ಯವರು ಕ್ಯಾಂಪ್ಕೋ ಕುಟುಂಬದವರಿಗೆ ಸಾಮೂಹಿಕವಾಗಿ ಹಾಡಿಸಿದರು.
ಸು.ರಾಮಣ್ಣನವರು ಕ್ಯಾಂಪ್ಕೋ ಕುಟುಂಬದವರಿಗೆ ಮಾರ್ಗದರ್ಶನ ನೀಡಿ ಚಿರಪುರಾತನವಾದ ಸಂಸ್ಥೆ ಕುಟುಂಬ ವ್ಯವಸ್ಥೆ ಹಾಗೂ ಅದೇ ನಮ್ಮ ಮನೆ. ನನ್ನವರು ಎಂಬ ಅರಿವು ಹಿಂದೂ ಕುಟುಂಬದಲ್ಲಿ ಮಾತ್ರ ಸಾಧ್ಯ. ಹಿಂದೂ ಕುಟುಂಬವು ಯಾವತ್ತೂ ಬೇಸರವನ್ನು ತರುವಂಥಹದಲ್ಲ, ನಮ್ಮ ಕುಟುಂಬದ ಬಗ್ಗೆ ಆಗಾಗ ಮೆಲುಕು ಹಾಕುವುದರಿಂದ ಬೇಸರ ಆಗುವುದಿಲ್ಲ.
20 ವರ್ಷದ ಹಿಂದಿನ ಜೀವನವನ್ನು ನೆನಪು ಮಾಡಿದರು. ಹಿಂದೆ ಇದ್ದಷ್ಟು ಆರ್ಥಿಕ ಹಿನ್ನಡೆ ಈಗ ಇಲ್ಲ,ನಮ್ಮ ಮನೆಯಲ್ಲಿ ಕೊಳ್ಳುವ ಸಾಮಾರ್ಥ್ಯ ಈಗ ಹೆಚ್ಚಾಗಿದೆ. ನಮ್ಮ ಮನೆಯಲ್ಲಿ ಸಂಸ್ಕೃತಿ ಇದ್ದರೆ ಮಾತ್ರ ನೆಮ್ಮದಿ ಇರುತ್ತದೆ.”ಮ” ಎಂದರೆ ಮನಸ್ಸಿಗೆ, “ನೆ” ಎಂದರೆ ನೆಮ್ಮದಿ, ಎಲ್ಲಿ ನಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೋ ಅದು ಮನೆ. ಸಮ್ರದ್ಧಿ ಮತ್ತು ಸಂಸ್ಕೃತಿಯ ಮದ್ಯೆ ಸಮನ್ವಯ ಇರಬೇಕು.ನಮ್ಮ ಕುಟುಂಬದ ದಿನಚರಿ, ಕುಟುಂಬದ ರೀತಿ ನೀತಿ, ಪರಂಪರೆ ಯಾವ ರೀತಿ ಇರಬೇಕು ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಸಿದರು.
ಕ್ಯಾಂಪ್ಕೋ ಉದ್ಯೋಗಿಗಳ ರಿಕ್ರಿಯೇಷನ್ ಸೆಂಟರಿನ ಅಧ್ಯಕ್ಷ ಶ್ಯಾಮಪ್ರಸಾದ್ ಎಚ್ ಅವರು ಸು.ರಾಮಣ್ಣ ಮತ್ತು ಗಜಾನನ ಪೈ ಇವರಿಗೆ ಸ್ಮರಣಿಕೆಯನ್ನು ನೀಡಿದರು. ಶ್ರೀ ಕೃಷ್ಣಜನ್ಮಾಷ್ಟಮಿ ಯ ಪ್ರಯುಕ್ತ ನೆರವೇರಿಸಿದ ಮಕ್ಕಳ ಆನ್ಲೈನ್ ಶ್ರೀಕೃಷ್ಣ ವೇಷ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶ್ರೀಯುತ ಸು.ರಾಮಣ್ಣನವರು ಬಹುಮಾನ ವಿತರಿಸಿದರು.
ವಾಣಿ ಪ್ರಶಾಂತ್ ಭಟ್ ರವರು ಅತಿಥಿಗಳ ಪರಿಚಯವನ್ನು ಮಾಡಿದರು. ಶೋಭಾ ನಾಗೇಶ್ ಶ್ರೀಕೃಷ್ಣ ವೇಷ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿಯನ್ನು ಓದಿ ಹೇಳಿದರು. ಸುಲತಾ ಸತೀಶ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ರಿಕ್ರಿಯೇಷನ್ ಸೆಂಟರಿನ ಸದಸ್ಯರಾದ ಪ್ರಶಾಂತ್ ಡಿ. ಎಸ್, ಪ್ರಶಾಂತ್ ಭಟ್, ಸಂತೋಷ್ ಭಟ್ ಸಿ. ಎಚ್, ಮಹೇಶ್ ಪ್ರಭು, ಜಗದೀಶ್ .ಪಿ, ಶುಭಾ ಕೆ. ಸಿ ರಾವ್, ಸಂಪತ್ ರಾಜ್, ತುಳಸಿ ಹರೀಶ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಹಭೋಜನದ ವ್ಯವಸ್ಥೆ ಮಾಡಲಾಯಿತು.