
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಕೇಕೆ ಶುರುವಾದ ದಿನದಿಂದ ಅಲ್ಲಿದ್ದ ಬೇರೆ ಬೇರೆ ದೇಶದ ಜನರು ತಮ್ಮ ತಮ್ಮ ದೇಶಗಳಿಗೆ ತೆರಳಲು ಹವಣಿಸುತ್ತಿದ್ದಾರೆ. ಅಫ್ಘಾನಿಸ್ತಾನದ ಪ್ರಜೆಗಳೇ ಉಟ್ಟಬಟ್ಟೆಯಲ್ಲಿ ಆ ನರಕದಿಂದ ಪಾರಾಗಲು ಹರಸಾಹಸಪಡ್ತಿದ್ದಾರೆ. ಈ ಮಧ್ಯೆ ಭಾರತೀಯರೂ ಕೂಡ ಇಲ್ಲಿಗೆ ಬರುವಂತೆ ಮಾಡಲು ಕೇಂದ್ರ ಸರ್ಕಾರ ತ್ವರಿತಗತಿಯಲ್ಲಿ ಕ್ರಮಕೈಗೊಳ್ಳುತ್ತಿದೆ.
ಅಫ್ಘಾನಿಸ್ತಾನದಲ್ಲಿ ದಿನೇ ದಿನೇ ಪರಿಸ್ಥಿತಿ ಬಿಗಾಡಾಯಿಸುತ್ತಿದೆ. ತಾಲಿಬಾನ್ ಉಗ್ರರ ಕೇಕೆಗೆ ಬಲಾಢ್ಯ ರಾಷ್ಟ್ರಗಳೇ ಆತಂಕದಲ್ಲಿದ್ದು, ತಮ್ಮ ತಮ್ಮ ಪ್ರಜೆಗಳ ಮರಳುವಿಕೆಯನ್ನು ಎದುರು ನೋಡುತ್ತಿವೆ. ಅದಕ್ಕಾಗಿ, ನಿತ್ಯವೂ ವಿಶೇಷ ವಿಮಾನಗಳನ್ನೂ ಕಾಬೂಲ್ಗೆ ಕಳುಹಿಸಿಕೊಡ್ತಿವೆ. ಎಲ್ಲರಂತೆಯೇ ನಮ್ಮ ದೇಶದ ಪ್ರಜೆಗಳ ಮೇಲೂ ಕಾಳಜಿ ಹೊಂದಿರುವ ಕೇಂದ್ರ ಸರ್ಕಾರ ಕೂಡ ಕಳೆದೊಂದು ವಾರದಿಂದ ಅಲ್ಲಿರುವ ಭಾರತೀಯ ರಕ್ಷಣೆಗೆ ಹರಸಾಹಸಪಡ್ತಿದ್ದು, ಈಗ ಭಾರತೀಯರ ರಕ್ಷಣೆಗೆ ನಿತ್ಯ 2 ವಿಮಾನಗಳನ್ನು ಕಳುಹಿಸಿಕೊಡಲು ಅನುಮತಿ ದೊರೆತಿದೆ.
ನಿತ್ಯ 2 ವಿಮಾನಗಳಿಗೆ ಅನುಮತಿ!
ಕಾಬೂಲ್ನ ಹಮೀದ್ ಕರ್ಜೈ ಏರ್ಪೋರ್ಟ್ನಿಂದ ರಕ್ಷಣೆ
ಅಮೆರಿಕಾ, ನ್ಯಾಟೋ ಪಡೆ ನಿಯಂತ್ರಣದಲ್ಲಿರುವ ನಿಲ್ದಾಣ
ಭಾರತಕ್ಕೆ ದಿನಕ್ಕೆ 2 ವಿಮಾನಗಳನ್ನು ಕಳುಹಿಸಲು ಅನುಮತಿ
300ಕ್ಕೂ ಹೆಚ್ಚು ಭಾರತೀಯರ ರಕ್ಷಣೆ ಬಾಕಿ ಬಗ್ಗೆ ಮಾಹಿತಿ
ತಜಕಿಸ್ತಾನ & ಕತಾರ್ ಮೂಲಕ ವಿಮಾನಗಳ ಆಪರೇಷನ್
ತಾಲಿಬಾನ್ ಕಾಬೂಲ್ಗೆ ಲಗ್ಗೆ ಇಟ್ಟ ದಿನ ಅಂದ್ರೆ, ಆಗಸ್ಟ್ 15ರಿಂದಲೇ ಕಾಬೂಲ್ನಲ್ಲಿ ಭಾರತೀಯರ ರಕ್ಷಣಾಕಾರ್ಯ ಭರದಿಂದ ಸಾಗಿದೆ. ಕಾಬೂಲ್ನ ಹಮೀದ್ ಕರ್ಜೈ ಏರ್ಪೋರ್ಟ್ನಿಂದ ನಮ್ಮವರನ್ನು ಕರೆತರಬೇಕಿದೆ. ಸದ್ಯ, ಅಮೆರಿಕಾ ಹಾಗೂ ನ್ಯಾಟೋ ಪಡೆಯ ನಿಯಂತ್ರಣದಲ್ಲಿಯೇ ಹಮೀದ್ ಕರ್ಜೈ ಏರ್ಪೋರ್ಟ್ ಇದ್ದು, ಈಗ ಅವರು ಭಾರತಕ್ಕೆ ದಿನಕ್ಕೆ ವಿಮಾನಗಳನ್ನು ಕಳುಹಿಸಲು ಅನುಮತಿ ನೀಡಿದ್ದಾರೆ. ಇನ್ನು, 300ಕ್ಕೂ ಹೆಚ್ಚು ಭಾರತೀಯರು ಅಫ್ಘಾನಿಸ್ತಾನದ ಅಗ್ನಿ ಕುಂಡದಲ್ಲಿ ಸಿಲುಕಿದ್ದು, ಅವರೆಲ್ಲರನ್ನೂ ರಕ್ಷಿಸುವ ಹೊಣೆ ಕೇಂದ್ರ ಸರ್ಕಾರದ ಮುಂದಿದೆ. ತಜಕಿಸ್ತಾನ ಹಾಗೂ ಕತಾರ್ ಮೂಲಕ ಭಾರತೀಯ ವಿಮಾನಗಳು ಕಾರ್ಯಾಚರಣೆ ನಡೆಸಲಿವೆ.
ಅಮೆರಿಕ ಹಾಗೂ ನ್ಯಾಟೋ ಪಡೆಗಳು ನೀಡಿರುವ ಮಾಹಿತಿಯ ಪ್ರಕಾರ ಅವರಿಂದ ಈಗ 25 ವಿಮಾನಗಳು ಕಾರ್ಯನಿರ್ವಹಣೆ ಮಾಡುತ್ತಿದ್ದು, ತಮ್ಮ ನಾಗರಿಕರನ್ನು, ಶಸ್ತ್ರಾಸ್ತ್ರ ಉಪಕರಣಗಳ ರಕ್ಷಣೆ ಮಾಡಿಕೊಳ್ಳುತ್ತಿವೆ. ಇತ್ತೀಚಿನ ವರದಿಗಳ ಪ್ರಕಾರ ಏರ್ ಇಂಡಿಯಾದ ವಿಮಾನವೊಂದು 90 ಪ್ರಯಾಣಿಕರೊಂದಿಗೆ ಶೀಘ್ರವೇ ಭಾರತಕ್ಕೆ ತಲುಪಲಿದೆ. ಭಾರತ ಈಗಾಗಲೇ ತನ್ನ ರಾಯಭಾರಿ ಕಚೇರಿ ಅಧಿಕಾರಿಗಳು, ಸಿಬ್ಬಂದಿ ಸೇರಿ 180 ಪ್ರಯಾಣಿಕರನ್ನು ಸುರಕ್ಷಿತವಾಗಿ ವಾಪಸ್ ಕರೆಸಿಕೊಂಡಿದೆ. ಒಟ್ಟಾರೆ, ತಾಲಿಬಾನಿಗಳ ಕ್ರೌರ್ಯಕ್ಕೆ ಭಾರತೀಯರು ಸಿಲುಕದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ತಿದೆ.













