ಬಂಟ್ವಾಳ: ತಕರಾರಿನ ಜಾಗದ ವೀಕ್ಷಣೆಗೆ ತೆರಳಿದ್ದವರಿಗೆ ತಂಡವೊಂದು ಹಲ್ಲೆ ನಡೆಸಿ ಮತ್ತು ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿನಿ, ಬಟ್ಟೆ ಹರಿದು ಮಾನಭಂಗಕ್ಕೆ ಯತ್ನಿಸಿದ ಆರೋಪ ಕೇಳಿಬಂದಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಬಂಟ್ವಾಳ ಸಮೀಪದ ಜಕ್ರಿಬೆಟ್ಟಿನಲ್ಲಿ ನಡೆದಿದೆ.
ಎ. ೨೪ರಂದು ಸಂಜೆ ೬ ಗಂಟೆಗೆ ಜಕ್ರಿಬೆಟ್ಟು ನಿವಾಸಿ ಭುವನೇಶ್ವರಿ ರೈ ಅವರು ತಮಗೂ ಹಾಗೂ ರೀಟಾ ಸಿಕ್ವೇರಾಗೆ ಇರುವ ವಿವಾದಿತ ಜಾಗಕ್ಕೆ ಮೈಸೂರಿನಿಂದ ಪರಿಚಯದ ಸಂಘಟನೆಯೊಂದರ ಇಬ್ಬರನ್ನು ಕರೆಸಿಕೊಂಡಿದ್ದಾರೆ.
ಸಂಘಟನೆಯೊಂದರ ಶಿವು ಗೌಡ ಹಾಗೂ ಲಿಖಿತಾ ಅವರನ್ನು ಕರೆಸಿ ಜಾಗ ವೀಕ್ಷಣೆ ಮಾಡುತ್ತಿರುವಾಗ ತಂಡವೊಂದು ಆಗಮಿಸಿ ಹಲ್ಲೆ ನಡೆಸಿದೆ ಎಂದು ಭುವನೇಶ್ವರಿ ರೈ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಗಳಾದ ಸಂದೇಶ, ಸಂದೇಶನ ಪತ್ನಿ, ಆತನ ಸಹೋದರ, ಸುರೇಶ ಪೂಜಾರಿ, ಸುರೇಶ ಕುಲಾಲ್, ಶಾಲಿನಿ, ರೀಟಾ ಸಿಕ್ವೇರಾರ ಸಹೋದರಿ, ಸೀತಾರಾಮ ಶೆಟ್ಟಿ ಮತ್ತು ಇತರರು ಹಾರೆ, ಗುದ್ದಲಿ ಹಿಡಿದು ಹಲ್ಲೆ ನಡೆಸಿದ್ದಾರೆ. ಜತೆಗೆ ಭುವನೇಶ್ವರಿ ರೈ ಅವರ ಬಟ್ಟೆ ಹರಿದು ಮಾನಭಂಗ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.