ದೇವನಹಳ್ಳಿ: ಮದುವೆಯಾಗಿದ್ದ ಮಹಿಳೆ, ಪ್ರಿಯಕರ ನೇಣಿಗೆ ಶರಣಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಶಾಂತಿನಗರದ ಮನೆಯಲ್ಲಿ ನಡೆದಿದೆ.
ರಾಯಚೂರಿನ ಬಸವರಾಜ್(28), ಜ್ಯೋತಿ(26) ಆತ್ಮಹತ್ಯೆ ಮಾಡಿಕೊಂಡವರು.
ಆತ್ಮಹತ್ಯೆ ಮಾಡಿಕೊಂಡ ಜ್ಯೋತಿ ಮದುವೆಯಾದ ನಂತರವು ಸಂಬಂಧಿಕನಾಗಿದ್ದ ಬಸವರಾಜ್ ಜೊತೆ ಪ್ರೀತಿಯಲ್ಲಿದ್ದರು. ಪ್ರೀತಿಯಿಂದಾಗಿ ಮನೆಬಿಟ್ಟು ಪ್ರಿಯಕರನ ಜೊತೆ ಬಂದಿದ್ದರು. ಆದರೆ ಈಗ ಜ್ಯೋತಿ ಹಾಗೂ ಆಕೆಯ ಪ್ರಿಯಕರ ಇಬ್ಬರೂ ನೇಣಿಗೆ ಶರಣಾಗಿದ್ದಾರೆ. ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
20 ದಿನಗಳಿಂದಷ್ಟೆ ಗಂಡ ಹೆಂಡತಿ ಅಂತ ಹೇಳಿ ಬಸವರಾಜ್ ಮತ್ತು ಜ್ಯೋತಿ ಮನೆ ಬಾಡಿಗೆಗೆ ಪಡೆದುಕೊಂಡಿದ್ರು. ಆದರೆ ಬಾಡಿಗೆ ಮನೆಯಲ್ಲೆ ಕಳೆದ ಭಾನುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಯಿಂದ ದುರ್ವಾಸನೆ ಬರ್ತಿದ್ದನ್ನ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಹಿನ್ನೆಲೆ ಸ್ಥಳಕ್ಕೆ ಬಂದ ದೇವನಹಳ್ಳಿ ಪೊಲೀಸರು ಮನೆ ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.