ಬೆಂಗಳೂರು: ಕೊರೋನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಮೂಡುಬಿದಿರೆ ಮೂಲದ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಇಲ್ಲಿನ ಹೆಸರುಘಟ್ಟ ರಸ್ತೆಯ ಹಾವನೂರು ಬಡಾವಣೆಯಲ್ಲಿ ಇದ್ದಕ್ಕಿದ್ದ ಹಾಗೆ ಅನುಮಾನಾಸ್ಪದ ರೀತಿಯಲ್ಲಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 45 ವರ್ಷದ ಪ್ರಮೋದ್ ಹೆಗಡೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕಳೆದ 18 ವರ್ಷದಿಂದ ಬೆಂಗಳೂರಿನಲ್ಲಿ ಬ್ಯುಸಿನಸ್ ಮಾಡುತ್ತಿದ್ದ ಪ್ರಮೋದ್ ಹೆಗಡೆ ಬೆಂಗಳೂರಿನ ಪ್ರಸಿದ್ದ ಕಂಪನಿಗಳ ಟ್ರಾನ್ಸ್ ಪೋರ್ಟ್ ಏಜೆನ್ಸಿ ನಡೆಸುತ್ತಿದ್ದರು. ಬೆಂಗಳೂರಿನ ಉದ್ದಗಲಕ್ಕೂ ತನ್ನ ಟ್ರಾನ್ಸ್ ಪೋರ್ಟ್ ಬ್ಯುಸಿನೆಸ್ ಹರಡಿಸಿದ್ದ ಪ್ರಮೋದ್ ಇತ್ತೀಚೆಗೆ ವ್ಯಾವಹಾರಿಕವಾಗಿ ಸಾಲ ಮಾಡಿದ್ದರಂತೆ. ಅಲ್ಲದೆ ತನ್ನ ಸಂಬಂಧಿಯೊಬ್ಬರ ಬಳಿ 30 ಲಕ್ಷ ಸಾಲ ಮಾಡಿದ್ದರಂತೆ.
ಇತ್ತೀಚೆಗೆ ಐಪಿಎಲ್ ಬೆಟ್ಟಿಂಗ್ ಸಹ ಆಡುತ್ತಿರುವ ವಿಚಾರ ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ. ರಾತ್ರಿ ಐಪಿಎಲ್ ಮ್ಯಾಚ್ ನೋಡುತ್ತಿದ್ದ ವೇಳೆ ತನ್ನ ಸ್ನೇಹಿತನನ್ನು ಹೊರ ಕಳುಹಿಸಿ ಮನೆ ಒಳಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಬಂಧಿಯೊಬ್ಬರ ಮನೆಯ ಕಾರ್ಯಕ್ರಮಕ್ಕೆ ತೆರಳಿದ ಹೆಂಡತಿ ಫೋನ್ ಮಾಡಿದಾಗ ಮೃತ ಪ್ರಮೋದ್ ರಿಸೀವ್ ಮಾಡದಿದ್ದಕ್ಕೆ ಪತ್ನಿ ವೀಣಾ ಆತನ ಸ್ನೇಹಿತ ಶಶಿಗೌಡರಿಗೆ ಫೋನ್ ಮಾಡಿ ವಿಚಾರಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಬಾಗಲುಗುಂಟೆ ಪೊಲೀಸರು ಪ್ರಮೋದ್ ಮೃತದೇಹವನ್ನು ಸಪ್ತಗಿರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಯನ್ನು ಮಾಡಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.