
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನೆಲೆ ರಾಜ್ಯಾದ್ಯಂತ ಆರೋಗ್ಯ ಸಮೀಕ್ಷೆಗೆ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಮನೆ ಮನೆಗೆ ತೆರಳಿ ಆರೋಗ್ಯ ಸರ್ವೆ ಮಾಡುವಂತೆ ಆದೇಶ ನೀಡಲಾಗಿದೆ. ಆರೋಗ್ಯ ಸರ್ವೆ ಕುರಿತು ಸರ್ಕಾರ ಸುತ್ತೋಲೆ ಹೊರಡಿಸಿದೆ. ತೀವ್ರ ಉಸಿರಾಟ ಸಮಸ್ಯೆ ಇರುವ ಕೇಸ್ಗಳ ಸರ್ವೆಗೆ ಆದೇಶ ನೀಡಿದೆ.
ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುವಂತೆ ಸರ್ಕಾರ ಆದೇಶ ನೀಡಿದ್ದು ನಾಳೆಯಿಂದ ರಾಜ್ಯಾದ್ಯಂತ ಕೇಸ್ಗಳ ಸಮೀಕ್ಷೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ನಾಳೆಯಿಂದ 2022ರ ಜನವರಿ 15 ರವರೆಗೆ ಆರೋಗ್ಯ ಸರ್ವೆ ಕಾರ್ಯ ನಡೆಯಲಿದೆ. ಪ್ರತಿಯೊಂದು ಜಿಲ್ಲೆಗಳಲ್ಲಿ ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಬೇಕು. ಸಮೀಕ್ಷೆ ನಡೆಸಿ ಪೋರ್ಟಲ್ನಲ್ಲಿ ವರದಿ ಹಾಕಲು ಸೂಚನೆ ಕೊಡಲಾಗಿದೆ.

ಲಸಿಕೆ ಪಡೆಯದ ಸರ್ಕಾರಿ ನೌಕರರಿಗೆ ಕಚೇರಿಗೆ ಪ್ರವೇಶವಿಲ್ಲ
ಲಸಿಕೆ ಪಡೆಯದ ಸರ್ಕಾರಿ ನೌಕರರಿಗೆ ಕಚೇರಿಗೆ ಪ್ರವೇಶವಿಲ್ಲ ಎಂದು ಹುಬ್ಬಳ್ಳಿಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದ್ದಾರೆ. 2 ಡೋಸ್ ಲಸಿಕೆ ಪಡೆಯದ ಸಿಬ್ಬಂದಿಗೆ ಕಚೇರಿ ಪ್ರವೇಶವಿಲ್ಲ. ಈ ಬಗ್ಗೆ ಈಗಾಗಲೇ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಖಾಸಗಿ ಸಂಸ್ಥೆಗಳಿಗೂ ಈ ಆದೇಶ ಅನ್ವಯವಾಗಲಿದೆ ಎಂದು ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಜನವರಿ 3 ರಂದು 15-18 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗುತ್ತೆ. ಜನವರಿ 3 ರಂದು ಸಿಎಂ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. 60 ವರ್ಷ ಮೇಲ್ಪಟ್ಟ ಹೆಲ್ತ್ ವರ್ಕರ್ಸ್ಗೆ ಬೂಸ್ಟರ್ ಡೋಸ್ಗೆ ಚಾಲನೆ ನೀಡ್ತೇವೆ ಎಂದು ಹೇಳಿದ್ದಾರೆ.

ರಾತ್ರಿಯಲ್ಲಿ ಮಾತ್ರ ಕೊವಿಡ್ ಹರಡುತ್ತಾ ಅನ್ನುವವರಿಗೆ ನಾವೇನೂ ಮಾಡೋಕೆ ಆಗಲ್ಲ
ಒಮಿಕ್ರಾನ್ ಮತ್ತು ಕೊವಿಡ್ ವ್ಯಾಪಕತೆ ತಡೆಗಟ್ಟುವ ನಿಟ್ಟಿನಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ವಿಚಾರವಾಗಿ ಕೆಲವೊಬ್ಬರು ವಿತಂಡವಾದ ಮಾಡ್ತಾರೆ. ರಾತ್ರಿಯಲ್ಲಿ ಮಾತ್ರ ಕೊವಿಡ್ ಹರಡುತ್ತಾ ಅಂತ ಪ್ರಶ್ನಿಸ್ತಾರೆ. ಅಂಥವರಿಗೆ ನಾವೇನೂ ಮಾಡೋಕೆ ಆಗಲ್ಲ. ವೈಜ್ಞಾನಿಕ ದೃಷ್ಟಿಕೋನದ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಿದ್ದೇವೆ. ಈಗಾಗಲೇ ಘೋಷಣೆ ಮಾಡಿದಂತೆ 10 ದಿನಗಳ ಕಾಲ ರಾತ್ರಿ ಕರ್ಫ್ಯೂ ಇರಲಿದೆ. ಹೋಟೆಲ್, ಬಾರ್, ಪಬ್ ಇತ್ಯಾದಿಗಳು ಯಾವುದೇ ಚಟುವಟಿಕೆ ನಡೆಸುವಂತಿಲ್ಲ. ಇದಕ್ಕೆ ಜನರು ಸಹ ಸಹಕಾರ ನೀಡಬೇಕು. ಕೊವಿಡ್ ನಿಯಂತ್ರಣಕ್ಕೆ ಇದು ಅನಿವಾರ್ಯ ಎಂದು ಸುಧಾಕರ್ ಹೇಳಿದ್ದಾರೆ.

ಕೊವಿಡ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮ ಅನಿವಾರ್ಯ. ರಾತ್ರಿ ಕರ್ಫ್ಯೂ ಜೊತೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ. ಕರ್ನಾಟಕ ಒಂದೇ ಅಲ್ಲದೆ ದೇಶದ ಇತರ ರಾಜ್ಯಗಳಲ್ಲಿಯೂ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.











