ಬೆಂಗಳೂರು: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಟೆಕ್ಕಿ ಗೃಹಿಣಿ ಮಾಧುರಿ (26) ಮೃತ ಮಹಿಳೆ. ಮಾಧುರಿ ಕಳೆದ ಗುರುವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ, ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಗುರುಪ್ರಸಾದ್ ಎಂಬಾತನೊಂದಿಗೆ ಮಾಧುರಿ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಆರಂಭದಲ್ಲಿ ಸಂಸಾರ ಚೆನ್ನಾಗಿಯೇ ಇತ್ತು. ಕೆಲ ವರ್ಷಗಳ ನಂತರ ಇಬ್ಬರ ನಡುವೆ ಜಗಳ ಶುರುವಾಗಿದೆ. ಮದುವೆಯಾದರೂ ಮತ್ತೊಬ್ಬಳು ಯುವತಿಯ ಜೊತೆ ಪತಿ ಗುರುಪ್ರಸಾದ್ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಬಗ್ಗೆ ಗೊತ್ತಾಗಿ ಮಾಧುರಿ ಆತನನ್ನು ಪ್ರಶ್ನೆ ಮಾಡಲು ಶುರು ಮಾಡಿದ್ದಾಳೆ. ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಇದರಿಂದ ಪತಿ ವರದಕ್ಷಿಣೆಗಾಗಿ ಮಾಧುರಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಗುರುಪ್ರಸಾದ್ ಮತ್ತು ಕುಟುಂಬಸ್ಥರ ವಿರುದ್ಧ ವರ್ತೂರು ಠಾಣೆಗೆ ದೂರು ನೀಡಲಾಗಿತ್ತು.
ಇದರ ಹೊರತಾಗಿಯೂ ಕಳೆದ ಗುರುವಾರ ಮನೇಲಿ ಮತ್ತೆ ಜಗಳ ಶುರುವಾಗಿದೆ. ಈ ವೇಳೆ ಮಾಧುರಿ ಮನನೊಂದು ಮಗನ ಶಾಲೆಯಲ್ಲಿ ಕೆಮಿಕಲ್ ಎಕ್ಸಪೀರಿಮೆಂಟ್ ಗೆ ತಂದಿದ್ದ ರಾಸಾಯನಿಕವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಮಾಧುರಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಈ ದಂಪತಿಗೆ 6 ವರ್ಷದ ಮಗನಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಪೊಲೀಸರು ಆಕೆಯ ಹೇಳಿಕೆ ಪಡೆದುಕೊಂಡಿದ್ದರು. ಬಳಿಕ ಆಕೆಯ ಹೇಳಿಕೆಯೊಂದಿಗೆ ವರ್ತೂರು ಠಾಣೆ ಪೊಲೀಸ್ ಎಫ್ಐಆರ್ ದಾಖಲಿಸಿಕೊಂಡಿದ್ದರು. ತಾನು ಗರ್ಭಿಣಿ ಆಗಿದ್ದಾಗಿನಿಂದ ಗುರುಪ್ರಸಾದ್ ಬೇರೆಯವರ ಜೊತೆ ಅಕ್ರಮ ಸಂಬಂಧ ಹೊಂದಿದ್ದರು ಎಂದು ಮಾಧುರಿ ಪತಿ ವಿರುದ್ಧ ಪೊಲೀಸರು ಮುಂದೆ ಹೇಳಿಕೆಯಲ್ಲಿ ಆರೋಪಿಸಿದ್ದಾರೆ. ಅಲ್ಲದೇ ಹಲ್ಲೆ ಮಾಡಿ ವರದಕ್ಷಿಣೆ ಕಿರುಕುಳ ನೀಡಿದ್ದಾರೆ ಎಂದು ಹೇಳಿದ್ದಾಳೆ, ಇದೀಗ ಮಾಧುರಿ ಕುಟುಂಬಸ್ಥರು ಕೊಲೆ ಯತ್ನ ಆರೋಪ ಮಾಡಿದ್ದು, ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.