ವಿಟ್ಲ: ದೇಗುಲ ಅನ್ನೋ ಶಾಲೆಗೆ ಈ ದುಸ್ಥಿತಿ ಬಂದಿರೋದು ಮಕ್ಕಳು, ಪೋಷಕರು ಊರಿನ ಮಂದಿಗೆ ಆತಂಕವಾಗಿದೆ. ಆತಂಕ ಮಾತ್ರವಲ್ಲದೆ ಊರಿನ ಜನರು ಸಿಡಿದೆದ್ದು, ಇದು ಭ್ರಷ್ಟಾಚಾರದ ಆಡಳಿತ ಕರಿನೆರಳು ಎಂದು ಆರೋಪ ಮಾಡುತ್ತಿದ್ದಾರೆ.
ಹಳೆ ಕಟ್ಟಡ ಕೆಡವಿ ಹೊಸ ಕಟ್ಟಡಕ್ಕೆ ಅನುದಾನ ಬಿಡುಗಡೆಯಾದರೂ ನಯಾ ಪೈಸೆ ಕೂಡ ಶಾಲೆಯ ಅಭಿವೃದ್ಧಿಗೆ ಬಂದಿಲ್ಲ ಎಂದು ಆರೋಪಿಸುತ್ತಿದ್ದಾರೆ. ಇದು ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಕೋಡಪದವು ಸರಕಾರಿ ಶಾಲೆಯಾಗಿದೆ. ಈ ಶಾಲೆಯು ಶತಮಾನೋತ್ಸವದ ಹತ್ತಿರ ತಲುಪುತ್ತಿದೆ.
ಆದರೆ ಸ್ವತಃ ಶಿಕ್ಷಣ ಇಲಾಖೆ, ಜಿ.ಪಂ.ನ ತಾಂತ್ರಿಕ ಅಧಿಕಾರಿಗಳು ಕುಸಿದು ಬೀಳುವ ಓಬಿರಾಯನ ಕಾಲದ ಹಳೆಯ ಮೂರು ಶಾಲಾ ಕೊಠಡಿಗಳನ್ನು ತೆರವು ಮಾಡುವಂತೆ 2018ರಲ್ಲಿ ಶಾಲಾ ಮುಖ್ಯೋಪಾಧ್ಯಾಯರಿಗೆ ಮತ್ತು ಶಾಲಾ ಆಡಳಿತ ಸಮಿತಿಗೆ ನೋಟೀಸು ಮಾಡಿತ್ತು.
ಆದರೆ ಹೊಸ ಕಟ್ಟಡ ರಚನೆಗೆ ಬಿಡುಗಡೆಯಾಗಿದ್ದ 21.20ಲಕ್ಷ ರೂಪಾಯಿ ಅನುದಾನವನ್ನು ಈವರೆಗೂ ನೀಡದೇ ಇದೀಗ ಕನ್ಯಾನ ಶಾಲೆಯಲ್ಲಿ ಹೊಸ ಕಟ್ಟಡ ನಿರ್ಮಿಸುವ ಮೂಲಕ 90ವರ್ಷ ಇತಿಹಾಸವುಳ್ಳ ಗ್ರಾಮೀಣ ಪ್ರದೇಶದ ವಿದ್ಯಾಸಂಸ್ಥೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ವಿದ್ಯಾರ್ಥಿ ಪೋಷಕರು ಆರೋಪವಾಗಿದೆ.
ಇಷ್ಟೆಲ್ಲಾ ರೀತಿಯಲ್ಲಿ ಕಡೆಗಣಿಸಿದ್ದು ಮಾತ್ರವಲ್ಲದೇ ಶಾಲೆಯ ಹೆಸರಿನಲ್ಲಿದ್ದ 5.40ಎಕರೆ ಜಮೀನಿನಲ್ಲಿ ವಿಟ್ಲ ಪಡ್ನೂರು ಗ್ರಾಮಕರಣಿಕ ಹಾಗೂ ಕಂದಾಯ ಅಧಿಕಾರಿಗಳು 0.68ಎಕರೆ ಜಮೀನನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ಅಕ್ರಮ ಸಕ್ರಮ ಮೂಲಕ ಮಂಜೂರಾತಿ ಮಾಡಿದ್ದಾರೆ.
ಶಾಲೆಯ ಹೂದೋಟವನ್ನು ಸ್ಥಳೀಯ ಖಾಸಗಿ ಯುವಕ ಸಂಘವೊಂದಕ್ಕೆ ವರ್ಗಾಯಿಸಲು ತಯಾರಿ ನಡೆಸಿದ್ದಾರೆ ಎಂಬುದು ಶಾಲಾ ಹಿತರಕ್ಷಣಾ ಸಮಿತಿಯವರ ನೇರ ಆರೋಪವಾಗಿದೆ.132 ವಿದ್ಯಾರ್ಥಿಗಳಿಗೆ ಸರಿಯಾದ ಕಟ್ಟಡ, ಪಿಠೋಪಕರಣಗಳ ವ್ಯವಸ್ಥೆ ಇಲ್ಲದೆ ಮಕ್ಕಳು ಶಿಕ್ಷಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.