ವಿಟ್ಲ: ವಿಟ್ಲದ ಪುತ್ತೂರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್’ನಲ್ಲಿ ಜನರು ದಿನವೂ ಪರದಾಡಿ ಕೆಲಸಗಳಾಗದೆ ಹಿಂದಿರುಗಿ ಹಿಡಿಶಾಪ ಹಾಕುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಈ ಹಿಂದೆ ಸಿಂಡಿಕೇಟ್ ಬ್ಯಾಂಕ್ ಆಗಿದ್ದ ಕೆನರಾ ಬ್ಯಾಂಕ್ ಗೆ ಜನರು ಹೋಗಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗುತ್ತಿದೆ. ಜನರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ ಅನ್ನುವ ಮಾತುಗಳು ಕೇಳಿಬಂದಿದೆ.
ಬ್ಯಾಂಕ್ ಸಿಬ್ಬಂದಿಗಳಿಂದ ಸರಿಯಾದ ಮಾಹಿತಿ ಹಾಗೂ ಸೇವೆ ದೊರೆಯದೆ, ಹಿಡಿ ಶಾಪ ಹಾಕಿ ಹೋಗುತ್ತಿರುವ ಘಟನೆ ಪ್ರತಿ ನಿತ್ಯ ನಡೆಯುತ್ತಿದೆ. ಸ್ಥಳೀಯ ಭಾಷೆಬಾರದ ಸಿಬ್ಬಂದಿಗಳಿಂದ ಜನರು ಪರದಾಡುವ ಸ್ಥಿತಿ ಎಲ್ಲಾಕಡೆಗಳಲ್ಲಿ ಇರುವಾದದರೂ ವಿಟ್ಲದಲ್ಲಿ ಸ್ಥಳೀಯ ಸಿಬ್ಬಂದಿಗಳು ಜನರಿಗೆ ಸರಿಯಾಗಿ ಸ್ಪಂದಿಸದೆ ಇರುವ ಸ್ಥಿತಿ ಎದುರಾಗಿದೆ.
ರಾಷ್ಟ್ರೀಕೃತ ಬ್ಯಾಂಕ್ ಒಂದು ಈ ರೀತಿ ಮಾಡುತ್ತಿರುವುದರಿಂದ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ವಿಟ್ಲದಲ್ಲಿ ಕೆನರಾ ಬ್ಯಾಂಕ್ ಹಾಗೂ ಸಿಂಡಿಕೇಟ್ ಬ್ಯಾಂಕ್ ಬೇರೆ ಬೇರೆ ಇತ್ತು. ವಿಲೀನವಾದ ಬಳಿಕ ಎರಡೂ ಕಡೆಯ ಗ್ರಾಹಕರು ಒಂದೇ ಕಡೆಗೆ ಹೋಗುವಂತಾಗಿದೆ.
ಗಂಟೆಗಟ್ಟಲೆ ನಿಂತು ಬ್ಯಾಂಕ್ ಒಳಗಡೆ ತಮ್ಮ ಕೆಲಸ ಮಾಡಿಸಿಕೊಳ್ಳಲು ಹೋದರೆ ಸಿಬ್ಬಂದಿಗಳು ಸಹಕಾರ, ಸಲಹೆ ಸಮರ್ಪಕವಾಗಿ ನೀಡುವುದಿಲ್ಲ ಎಂಬುದು ಹಲವು ಜನರ ಆರೋಪವಾಗಿದೆ. ವ್ಯವಹರಿಸುವ ಸಮಯದಲ್ಲಿ ಕೊಂಚ ವ್ಯತ್ಯಾಸವಾದರೂ ಸರಿಯಾದ ಮಾಹಿತಿ ನೀಡದೆ ಗದರಿಸಿವುದು, ಜೊತೆಯಲ್ಲಿ ತಾಂತ್ರಿಕ ದೋಷವೂ ಕೂಡ ಬ್ಯಾಂಕ್’ನಲ್ಲಿ ಹೆಚ್ಚಾಗಿ ಕಾಣುತ್ತಿದೆ. ಸಿಬ್ಬಂದಿಗಳು ಅವರವರ ಸ್ಥಾನದಲ್ಲಿ ಇರುವುದೂ ವಿರಳ. ದಿನಲೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಬ್ಯಾಂಕ್ ಸಿಬ್ಬಂದಿಗಳಿಗೆ ಜನರ ಸೇವೆ ಮಾಡುವ ಮನೋಭಾವ ಇಲ್ಲ. ಜನರ ಕೆಲಸವನ್ನು ಸರಿಯಾಗಿ ನಿರ್ವಹಿಸದೇ ಇರುವ ಬಗ್ಗೆ ಹಲವು ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಬ್ಯಾಂಕ್ ಸಿಬ್ಬಂದಿಗಳ ವರ್ತನೆ ವಿರುದ್ದ ಹೋರಾಟ ಮಾಡುವ ಅನಿವಾರ್ಯತೆ ಉಂಟಾಗುವ ಮೊದಲೇ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಜನರ ಅಭಿಪ್ರಾಯವಾಗಿದೆ.