ವಿಟ್ಲ: ಶಾಲೆ ಮತ್ತು ಧಾರ್ಮಿಕ ಕೇಂದ್ರಗಳು ಪ್ರತಿ ಗ್ರಾಮದ ಪ್ರತಿಬಿಂಬ. ಇವುಗಳಲ್ಲಿ ಜನ ಸಹಭಾಗಿತ್ವವೇ ಗ್ರಾಮದ ಅಭಿವೃದ್ಧಿ – ಎಂದು ಮಾಣಿಲ ಶ್ರೀಧಾಮದ ಪರಮಪೂಜ್ಯ ಸ್ವಾಮೀಜಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು. ಇವರು ದಿನಾಂಕ 31 12 2022 ರಂದು ನಡೆದ ಸರಕಾರಿ ಪ್ರೌಢ ಶಾಲೆ ಮಾಣಿಲದ ಶಾಲಾವಾರ್ಷಿಕೋತ್ಸವ ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಹಮ್ಮಿಕೊಳ್ಳಲಾದ ಅಭಿವೃದ್ಧಿ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ದೀಪ ಪ್ರಜ್ವಲನ ಮಾಡಿ ಆಶೀರ್ವಚನ ಮಾಡಿ ಮಾತನಾಡಿದರು.
ಶ್ರೀ ಕಾಳಿಕಾ೦ಜನೇಯ ಕ್ಷೇತ್ರ ಕುಕ್ಕಾಜೆ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿಯವರು ಶುಭ ನುಡಿಗೈದರು. ಪೆರುವಾಯಿ ಫಾತಿಮಾ ಚರ್ಚ್ ನ ಧರ್ಮಗುರು ರೆ| ಫಾ| ವಿಶಾಲ್ ಮೋನಿಸ್ ಶುಭ ನುಡಿಗೈದರು. ಮಾನ್ಯ ಶಾಸಕ ಸಂಜೀವ ಮಠಂದೂರು ಅವರು ಆಗಮಿಸಿ ಶಾಲೆಗೆ 16.4 ಲಕ್ಷ ರೂ ಅನುದಾನದಲ್ಲಿ ಮಂಜೂರಾದ ಎರಡು ತರಗತಿ ಕೊಠಡಿಗಳಿಗೆ ಶಿಲಾನ್ಯಾಸ ಮಾಡಿ ಮಾತಾಡಿದರು. 2 ಲಕ್ಷ ರೂ ಅನುದಾನದ ಇ – ಓದು (ಪ್ರೊಜೆಕ್ಟರ್) ಕಾರ್ಯಕ್ರಮಕ್ಕೂ ಚಾಲನೆ ನೀಡಿದರು.
ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಶಿವಪ್ರಸಾದ್ ಸೂರಂಪಳ್ಳ ವಹಿಸಿ ಮಾತನಾಡಿದರು. ಶ್ರೀ ಸತ್ಯಸಾಯಿ ಲೋಕ ಸೇವಾ ವಿದ್ಯಾಸಂಸ್ಥೆ ಅಳಿಕೆಯ ಸಂಚಾಲಕ ಚಂದ್ರಶೇಖರ ಭಟ್ ಆಶಯ ಭಾಷಣ ಮಾಡಿ ವಿದ್ಯಾರ್ಥಿಗಳ ಸಾಧನೆ, ಶಾಲಾ ಅಭಿವೃದ್ಧಿಯನ್ನು ಪ್ರಶಂಸಿದರು.
ಈ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾಲಿಂಗನಾಯ್ಕ ಅಮೈ , ಶಾಲಾ ಸಂಸ್ಥಾಪಕರೂ ಸ್ಥಳದಾನಿಗಳೂ ಆಗಿರುವ ಮುರುವ ನಡುಮನೆ ಮಹಾಬಲ ಭಟ್, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಾಧಾಕೃಷ್ಣ ಮುಣಿಯಾಣಿ ತಚ್ಚಮೆ, ಅಂತಾರಾಷ್ಟ್ರೀಯ ಛಾಯಾಗ್ರಹಣ ಪ್ರಶಸ್ತಿ ವಿಜೇತ ದಯಾನಂದ ಕುಕ್ಕಾಜೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ವಿಲ್ಫ್ರೆಡ್ ಡಿಸೋಜ, ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸುಂದರ ಭಟ್.ಎನ್ ಹಾಗೂ ಶಾಲಾ ದ್ವಿ.ದ ಸಹಾಯಕಿ ಗಿರಿಜ ಕೆ ಇವರನ್ನು ಸನ್ಮಾನಿಸಿ ಗೌರವಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾಣಿಲ ಗ್ರಾ ಪಂ ಅಧ್ಯಕ್ಷೆ ವನಿತ, ಪೆರುವಾಯಿ ಗ್ರಾಪಂ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ವೈದ್ಯ ದುರ್ಗಾ ಪ್ರಸಾದ್ ಎ. ವಿ ವಕೀಲ ಮೋಹನ್ ಮೈರ, ಹಿರಿಯ ಸಾಹಿತಿ ಅಬ್ದುಲ್ಲ ತೊಡಿಕಾನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು ಸ್ವಾಗತಿಸಿದರು. ಕಾರ್ಯದರ್ಶಿ ವಿಷ್ಣು ಕನ್ನಡಗುಳಿ ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಶಾಲೆಯಲ್ಲಿ ಕೈಗೊಂಡ ಶೈಕ್ಷಣಿಕ ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಕೆ.ಜಿ ವರದಿ ವಾಚನ ಮಾಡಿದರು.
ಇದೇ ಸಂದರ್ಭದಲ್ಲಿ ಶಾಲಾ ಸ್ಮರಣ ಸಂಚಿಕೆ ‘ಅಮೃತ ಸಿಂಚನ’ ದ ಮುಖಪುಟ ಅನಾವರಣ ಮಾಡಲಾಯಿತು.ದೈ ಶಿಕ್ಷಕ ಉಮಾನಾಥ ರೈ ಮೇರಾವು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಭುವನೇಶ್ವರ್ ಸಿ ವಂದಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನಾ ಗೀತೆ ಹಾಡಿದರು. ಶಾಲಾ ಶಿಕ್ಷಕ ವರ್ಗ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಪೋಷಕರು, ಹಿರಿಯ ವಿದ್ಯಾರ್ಥಿಗಳು ಊರ ಪರವೂರ ವಿದ್ಯಾಭಿಮಾನಿಳು, ಹಿತೈಶಿಗಳು ಕಾರ್ಯಕ್ರಮದಲ್ಲಿ ಸಹಭಾಗಿಗಳಾದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಹಾಗೂ ಮಕ್ಕಳಿಂದ ‘ನರಕಾಸುರ ವಧೆ ” ಯಕ್ಷಗಾನ ಪ್ರದರ್ಶನ ನಡೆಯಿತು.