ವಿಟ್ಲ: ಜೂ.27ರಂದು ನಡೆದಿದ್ದ ವಿವಾಹಿತ ಮಹಿಳೆ ಶಕುಂತಳಾ ಅವರ ಕೊಲೆ ಪೂರ್ವದ್ವೇಷದಿಂದ ನಡೆದಿದ್ದು, ಆರೋಪಿಯು ಕೊಲೆಯ ಕಾರಣವನ್ನ ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ. ತನ್ನೊಂದಿಗೆ ಒಡನಾಟ ಹೊಂದಿದ್ದರೂ ಟಯರ್ ಅಂಗಡಿಯಾತನೋರ್ವನೊಂದಿಗೆ ಸಖ್ಯ ಬೆಳೆಸಿದ್ದ ಸಿಟ್ಟಿನಿಂದ ಶಕುಂತಳಾರವರನ್ನು ಕೊಲೆಗೈದಿರುವುದಾಗಿ ಆರೋಪಿ ಶ್ರೀಧರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭಿಸಿದೆ.
ಐದು ವರುಷಗಳಿಂದ ಒಡನಾಟ: ಹೊಟೇಲ್ ಪ್ರಾರಂಭಿಸಲು ಹಣಕಾಸು ವ್ಯವಸ್ಥೆ ಮಾಡಿದ್ದ ಶ್ರೀಧರ
ಆರೋಪಿ ಶ್ರೀಧರ ಹಾಗೂ ಮೃತ ಶಕುಂತಳಾರವರು ಕಳೆದ ಐದು ವರುಷಗಳಿಂದ ಪರಿಚಿತರಾಗಿದ್ದರು. ಶಕುಂತಳಾರವರು ವಿವಾಹಿತರಾಗಿದ್ದರೂ ಇವರಿಬ್ಬರ ಮಧ್ಯೆ ಉತ್ತಮ ಬಾಂಧವ್ಯ ಇತ್ತು. ಶಕುಂತಳಾರವರು ಆರಂಭದಲ್ಲಿ ಪುತ್ತೂರಿನ ಕೆಲವು ಹೊಟೇಲ್ ಗಳಲ್ಲಿ ಕೆಲಸ ಮಾಡಿಕೊಂಡಿದ್ದ ವೇಳೆ ಶ್ರೀ ಧರನ ಆಟೋದಲ್ಲಿಯೇ ಬಂದು ಹೋಗುತ್ತಿದ್ದರು. ವರುಷಗಳ ಹಿಂದೆ ಆಕೆ ದ್ವಿಚಕ್ರ ವಾಹನ ಖರೀದಿಸಿದ ಬಳಿಕ ಆಕೆ ಒಬ್ಬಂಟಿಯಾಗಿ ದ್ವಿಚಕ್ರ ವಾಹನದಲ್ಲಿಯೇ ಹೊಟೇಲ್ ಗೆ ಹೋಗಿ ಬರುತ್ತಿದ್ದರು. ಶಕುಂತಳಾರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಹಿನ್ನೆಲೆಯಲ್ಲಿ ಸ್ವಂತ ಹೊಟೇಲ್ ತೆರೆಯುವಂತೆ ಶ್ರೀ ಧರ್ ಆಕೆಗೆ ಸಲಹೆ ನೀಡಿ, ಬೊಳುವಾರಿನಲ್ಲಿ ಹೊಟೇಲ್ ಪ್ರಾರಂಭಿಸುವಾಗ ಶಕುಂತಳಾರಿಗೆ ಹಣಕಾಸಿನ ವ್ಯವಸ್ಥೆಯನ್ನೂ ಮಾಡಿರುವುದಾಗಿ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.
ಟಯರ್ ಅಂಗಡಿಯಾತನೊಂದಿಗೆ ಸ್ನೇಹಾಚಾರ- ಹೊಸ ಚಾಕು ಖರೀದಿಸಿ ಬಂದ ಆರೋಪಿ.!?
ಶ್ರೀ ಧರ್ ಜೊತೆ ಚೆನ್ನಾಗಿಯೇ ಇದ್ದ ಶಕುಂತಳಾರಿಗೆ, ತನ್ನ ಹೊಟೇಲ್ಗೆ ಬರುತ್ತಿದ್ದ ಪುತ್ತೂರಿನ ಟಯರ್ ಅಂಗಡಿಯೊಂದರ ವ್ಯಕ್ತಿಯ ಪರಿಚಯವಾಗಿತ್ತು. ಬಳಿಕದ ದಿನಗಳಲ್ಲಿ ಅವರಿಬ್ಬರೂ ಅನ್ಯೋನ್ಯವಾಗಿದ್ದರು. ಆತನ ಜೊತೆ ಸಖ್ಯ ಬೆಳೆಸದಂತೆ ಶಕುಂತಳಾಳಿಗೆ ಶ್ರೀ ಧರ ಎಚ್ಚರಿಕೆ ನೀಡಿದ್ದರು, ಆಕೆ ಟಯರ್ ಅಂಗಡಿಯವನೊಂದಿಗಿನ ಸ್ನೇ ಹಾಚಾರವನ್ನು ಮುಂದುವರೆಸಿದ್ದರು.ಈ ವಿಚಾರ ಅವರಿಬ್ಬರೊಳಗೆ ಗಲಾಟೆಗೆ ಕಾರಣವಾಗಿತ್ತು. ಜೂ.27ರಂದು ಮಧ್ಯಾ ಹ್ನ ಶ್ರೀ ಧರ್ ಕೊಂಬೆಟ್ಟಿನಲ್ಲಿರುವ ಶಕುಂತಳಾರವರ ಹೊಟೇಲ್ಗೆ ತೆರಳಿದ್ದ ವೇಳೆ ಆಕೆ ಅಲ್ಲಿರಲಿಲ್ಲ.
ಬಳಿಕ ಟಯರ್ ಅಂಗಡಿಯಲ್ಲಿ ಹೋಗಿ ನೋಡಿದಾಗ ಆ ವ್ಯಕ್ತಿಯೂ ಇಲ್ಲದಿರುವುದನ್ನು ಗಮನಿಸಿದ್ದ ಶ್ರೀ ಧರ್ ಕೆಂಡಾಮಂಡಲವಾಗಿ, ಅವರಿಬ್ಬರೂ ಜೊತೆಯಾಗಿ ಹೋಗಿರಬೇಕೆಂದು ಸಂಶಯಗೊಂಡಿದ್ದ ಶ್ರೀ ಧರ ನೇರವಾಗಿ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಅಂಗಡಿಯೊಂದರಿಂದ ಹೊಸ ಚಾಕೊಂದನ್ನು ಖರೀದಿ ಮಾಡಿ ಅನಂತಾಡಿ ಕಡೆಗೆ ತೆರಳಿದ್ದ. ಈ ವೇಳೆ ಟಯರ್ ಅಂಗಡಿಯ ವ್ಯಕ್ತಿ ಮಾಣಿ ಕಡೆಯಿಂದ ಪುತ್ತೂರು ಕಡೆಗೆ ತನ್ನ ದ್ವಿಚಕ್ರ ವಾಹನದಲ್ಲಿ ಬರುತ್ತಿರುವುದನ್ನು ಗಮನಿಸಿದ್ದ ಶ್ರೀ ಧರ್ ನೇರಳಕಟ್ಟೆ ಸಮೀಪ ಆತನನ್ನು ತಡೆದು ನಿಲ್ಲಿಸಿ ವಿಚಾರಿಸಿದ್ದ. ಈ ವೇಳೆ ಅವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಇದನ್ನು ಕಂಡು ಸ್ಥಳೀಯರು ಸೇರುತ್ತಿರುವುದನ್ನು ಗಮನಿಸಿ ಅವರಿಬ್ಬರು ಅಲ್ಲಿಂದ ತೆರಳಿದ್ದರೆ.
ಶಕುಂತಳಾರ ಸ್ಕೂಟರ್ ತಡೆದು ಚಾಕುವಿನಿಂದ ಇರಿದು ಪರಾರಿ
ದ್ವಿಚಕ್ರ ವಾಹನದಲ್ಲಿ ಮನೆಯಿಂದ ಹೊರಬಂದಿದ್ದ ಶಕುಂತಳಾರವರು ನೇರಳಕಟ್ಟೆ ಜನಪ್ರಿಯ ಗಾರ್ಡನ್ ಸಮೀಪ ತಲುಪುತ್ತಿದ್ದಂತೆ ಶ್ರೀ ಧರ್ ತನ್ನ ಆಟೋವನ್ನು ಆಕೆಯ ಸ್ಕೂಟರ್’ಗೆ ಅಡ್ಡ ವಿಟ್ಟು ಆಕೆಯೊಂದಿಗೆ ಮಾತಿಗಿಳಿದಿದ್ದ. ಈ ವೇಳೆ ಅವರೊಳಗೆ ಮಾತಿನ ಚಕಮಕಿ ನಡೆದು ಶ್ರೀ ಧರ ತಾನು ತಂದಿದ್ದ ಹೊಸ ಚಾಕುವಿನಿಂದ ಶಕುಂತಳಾರಿಗೆ ಇರಿದು ಪರಾರಿಯಾಗಿದ್ದ. ಘಟನೆಯ ಬಗ್ಗೆ ಮಾಹಿತಿ ಅರಿತ ಸ್ಥಳೀಯರು ಸ್ಥಳಕ್ಕಾಗಮಿಸಿ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಕುಂತಳಾರವರನ್ನು ಆಸ್ಪತ್ರೆ ಗೆ ದಾಖಲಿಸಿದರಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು.
ಕೃತ್ಯ ನಡೆಸಿ ಆತ್ಮಹತ್ಯೆ ಮಾಡಿಕೊಳ್ಳಲೆಂದು ತೆರಳಿದ್ದ ಆರೋಪಿ ಶ್ರೀ ಧರನ ಬಂಧನ
ಕೃತ್ಯ ನಡೆಸಿ ಆರೋಪಿ ಶ್ರೀ ಧರ ಅಲ್ಲಿಂದ ಪೆರಾಜೆ ರಸ್ತೆಯಾಗಿ ಮಾಣಿ- ಉಪ್ಪಿನಂಗಡಿ ರಸ್ತೆಗೆ ತೆರಳಿ ಅಲ್ಲಿಂದ ಗುರುವಾಯನಕೆರೆ ಮೂಲಕ ಚಾರ್ಮಾಡಿ ರಸ್ತೆಯಲ್ಲಿ ಸಾಗಿದ್ದ. ಘಟನೆ ನಡೆದ ಕೂಡಲೇ ವಿಟ್ಲ ಠಾಣಾ ಇನ್ಸ್ಪೆಕ್ಟ ರ್ ಹೆಚ್.ಈ. ನಾಗರಾಜ್ ನೇತೃತ್ವದ ಪೊಲೀಸ್ ತಂಡ ಆರೋಪಿ ಪರಾರಿಯಾಗಿರುವ ವಾಹನದ ಸಂಖ್ಯೆ ಯನ್ನು ಎಲ್ಲಾ ಪೊಲೀಸ್ ಠಾಣೆಗಳಿಗೆ ರವಾನೆ ಮಾಡಿದ್ದರು. ಆರೋಪಿಯು ರಿಕ್ಷಾದಲ್ಲಿ ಚಾರ್ಮಾಡಿ ಸಮೀಪದ ಚೆಕ್ ಪೋಸ್ಟ್ ತಲುಪುತ್ತಿದ್ದಂತೆ ಅಲ್ಲಿನ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು.
ಅಲ್ಲಿಗೆ ತೆರಳಿದ ವಿಟ್ಲ ಠಾಣಾ ಪೊಲೀಸರು ಆರೋಪಿಯನ್ನು ತಮ್ಮ ವಶಕ್ಕೆ ಪಡೆದು ವಿಟ್ಲ ಠಾಣೆಗೆ ಕರೆತಂದಿದ್ದರು. ತಾನು ಕೃತ್ಯ ನಡೆಸಿದ ಬಳಿಕ ಆತ್ಮ ಹತ್ಯೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಚಾರ್ಮಾಡಿ ಕಡೆಗೆ ತೆರಳಿದ್ದುದಾಗಿ ತನಿಖೆ ವೇಳೆ ಆರೋಪಿ ಶ್ರೀ ಧರ್ ಮಾಹಿತಿ ನೀಡಿದ್ದ ಎನ್ನಲಾಗಿದೆ.
ಆರೋಪಿಗೆ ನ್ಯಾಯಾಂಗ ಬಂಧನ: ಟಯರ್ ಅಂಗಡಿಯಾತ ನಾಪತ್ತೆ.!!
ಬಂಧಿತ ಆರೋಪಿಯನ್ನು ಸುದೀರ್ಘ ವಿಚಾರಣೆಗೊಳಪಡಿಸಿದ್ದ ಪೊಲೀಸರಿಗೆ ಆತ ಕೆಲವೊಂದು ಮಹತ್ತರವಾದ ಸಂಗತಿಗಳನ್ನು ತಿಳಿಸಿದ್ದಾನೆ. ವಿಚಾರಣೆ ಬಳಿಕ ವಿಟ್ಲ ಠಾಣಾ ಇನ್ಸ್ಪೆಕ್ಟರ್ ಹೆಚ್.ಈ. ನಾಗರಾಜ್ ನೇತೃತ್ವದ ಪೊಲೀಸರ ತಂಡ ಆರೋಪಿಯನ್ನು ನೇರಳಕಟ್ಟೆಯ ಘಟನಾ ಸ್ಥಳ ಹಾಗೂ ಆತ ಚಾಕು ಖರೀದಿಸಿದ್ದ ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಅಂಗಡಿಗೆ ಕರೆದೊಯ್ದು ತನಿಖೆ ನಡೆಸಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು , ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಶಕುಂತಳಾರೊಂದಿಗೆ ನಂಟು ಹೊಂದಿದ್ದರೆನ್ನಲಾಗಿರುವ, ಪುತ್ತೂರಿನ ಟಯರ್ ಅಂಗಡಿಯಾತ ಘಟನೆ ಬಳಿಕ ನಾಪತ್ತೆಯಾಗಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಘಟನೆ ಸಂಬಂಧ ಪೊಲೀಸರು ಟಯರ್ ಅಂಗಡಿಯಾತನನ್ನೂ ಪತ್ತೆ ಮಾಡಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.