
ಬೆಂಗಳೂರು: ಸಾರಿಗೆ ಇಲಾಖೆಯ ನೌಕರರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಸಾರಿಗೆ ಇಲಾಖೆಯ 4 ನಿಗಮಗಳ ನೌಕರರ ತುಟ್ಟಿ ಭತ್ಯೆ ಹೆಚ್ಚಿಸಿದೆ. ಜುಲೈ 1ರಿಂದ ಅನ್ವಯವಾಗುವಂತೆ ಶೇಕಡಾ 11.25ರಿಂದ ಶೇ. 21.50ರಷ್ಟು ತುಟ್ಟಿ ಭತ್ಯೆ ಹೆಚ್ಚಳಕ್ಕೆ ಎಲ್ಲಾ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿ ಜುಲೈ 27ರಂದು ತುಟ್ಟಿ ಭತ್ಯೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶ ಅನ್ವಯ ನೌಕರರ ವೇತನಕ್ಕೆ ತುಟ್ಟಿ ಭತ್ಯೆ ಹೆಚ್ಚಳದ ಮೊತ್ತ ಸೇರ್ಪಡೆಯಾಗಲಿದೆ.

ಕರ್ನಾಟಕ ಸರ್ಕಾರವು ಉದ್ಯೋಗಿಗಳಿಗೆ ಶೇ 11ರಷ್ಟು ತುಟ್ಟಿಭತ್ಯೆ ನೀಡಲು ನಿರ್ಧರಿಸಿರುವ ವಿಷಯವನ್ನು ಜುಲೈ 21ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬಹಿರಂಗಪಡಿಸಿತ್ತು. ನಾವು ಮನವಿ ಪತ್ರ ನೀಡಿದ ನಂತರ ಮುಖ್ಯಮಂತ್ರಿಗಳು ಈ ಸಂಬಂಧ ಹಣಕಾಸು ಇಲಾಖೆಗೆ ಆದೇಶ ನೀಡಿ ಡಿಎ ಹೆಚ್ಚಿಸಲು ಸೂಚಿಸಿದರು. ಕೊರೊನಾ ಪಿಡುಗಿನ ಕಾರಣ ಕಳೆದ ವರ್ಷವೂ ಡಿಎ ಹೆಚ್ಚಿಸಿರಲಿಲ್ಲ. ಮೂರು ಹಂತಗಳಲ್ಲಿ ಡಿಎ ಹೆಚ್ಚಳವನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿಯನ್ನು ವಿನಂತಿಸಲಾಗಿತ್ತು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದ್ದರು.

ಡಿಎ ಹೆಚ್ಚಳದಿಂದ 6 ಲಕ್ಷ ಸರ್ಕಾರಿ ನೌಕರರು, 4.5 ಲಕ್ಷ ಪಿಂಚಣಿದಾರರು ಮತ್ತು ವಿವಿಧ ನಿಗಮ ಮಂಡಳಿಗಳಲ್ಲಿ ಸೇವೆ ಸಲ್ಲಿಸುತ್ತಿರುವ 3 ಲಕ್ಷ ಉದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂದು ನೌಕರರ ಸಂಘ ಹೇಳಿತ್ತು.












