ಸುರತ್ಕಲ್: ಕಾಟಿಪಳ್ಳ 4ನೇ ಬ್ಲಾಕ್ನ ಫ್ಯಾನ್ಸಿ ಅಂಗಡಿ ಮಾಲಕ ಅಬ್ದುಲ್ ಜಲೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಶೈಲು ಯಾನೆ ಶೈಲೇಶ್(21), ಸುಮಿತ್ ಕಾಂಚನ್ ಯಾನೆ ಮುನ್ನ(24) ಮತ್ತು ಆರೋಪಿಗಳಿಗೆ ಬೈಕ್ನಲ್ಲಿ ಡ್ರಾಪ್ ನೀಡಿದ ಪಚ್ಚು ಯಾನೆ ಪವನ್(23) ಎನ್ನಲಾಗಿದೆ.
ಪ್ರಮುಖ ಆರೋಪಿ ಶೈಲು ಯಾನೆ ಶೈಲೇಶ್ ನನ್ನು ಕಾಪುವಿನ ಲಾಡ್ಜ್ ವೊಂದರಲ್ಲಿ ವಶಕ್ಕೆ ಪಡೆಯಲಾಗಿದೆ, ಈತ ಈ ಹಿಂದೆ ಹಲವು ಪ್ರಮುಖ ಪ್ರಕರಣಗಳಲ್ಲಿ ಗುರುತಿಸಿಕೊಂಡಿದ್ದು, ಕಾಟಿಪಳ್ಳದಲ್ಲಿ ನಡೆದ ಪಿಂಕಿ ನವಾಝ್ ಕೊಲೆ ಯತ್ನದ ಪ್ರಮುಖ ಆರೋಪಿಯಾಗಿದ್ದಾನೆ.
ಪೊಲೀಸರು ಈ ಪ್ರಕರಣದಲ್ಲಿ ವಿಚಾರಣೆಗಾಗಿ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆದಿದ್ದು, ಪ್ರಕರಣದ ಬಗ್ಗೆ ಕುತೂಹಲ ಮೂಡಿಸಿದೆ. ಪ್ರಕರಣ ಸಂಬಂಧ ನಾವು ಇದೀಗ ಇಬ್ಬರು ಮಹಿಳೆಯರು ಮತ್ತು ಮೂವರು ಪುರುಷರನ್ನು ವಶಕ್ಕೆ ತೆಗೆದುಕೊಂಡಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ರವರು ಹತ್ಯೆಯ ಹಿಂದಿನ ಉದ್ದೇಶದ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರು. ಹತ್ಯೆಯ ಹಿಂದಿನ ಕಾರಣಗಳಿಗೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಬೇಕಾಗಿದೆ ಎಂದು ಹೇಳಿದಾರೆ.
ಜಲೀಲ್ ಹತ್ಯೆ ಪ್ರಕರಣದಲ್ಲಿ ಇದೀಗ ಬಂಧಿತರಾಗಿರುವ ಹಂತಕರು ಸುರತ್ಕಲ್ ಆಸುಪಾಸಿನ ಕುಖ್ಯಾತ ಕ್ರಿಮಿನಲ್ ಗ್ಯಾಂಗ್ ನಲ್ಲಿ ಗುರುತಿಸಿಕೊಂಡವರಾಗಿದೆ. ಈ ಹಿಂದೆ ಇದೇ ಸ್ಥಳದಲ್ಲಿ ಚಾಲಕ ರವೂಫ್ ಎಂಬವರನ್ನು ಹತ್ಯೆಗೈಯಲಾಗಿತ್ತು, ಚಾಲಕ ರವೂಫ್ ಹಂತಕನ ಪುತ್ರ ಜಲೀಲ್ ಹತ್ಯೆಯಲ್ಲಿ ಶಾಮೀಲಾಗಿರುವುದು ದೃಢಪಟ್ಟಿದೆ. ಜಲೀಲ್ ಹಾಗೂ ರವೂಫ್ ಹತ್ಯೆಯಾದ ಸ್ಥಳ ಅಜುಬಾಜಿನಲ್ಲಿದೆ. ಅಂದು ರವೂಫ್ ನನ್ನು ಹತ್ಯೆಗೈದ ಹಂತಕನ ಪುತ್ರನೇ ಇಂದು ಜಲೀಲ್ ನನ್ನು ಹತ್ಯೆಗೈದ ಪ್ರಕರಣದಲ್ಲಿ ಶಾಮಿಲಾಗಿದ್ದಾನೆ