
ಪುತ್ತೂರು: ಕೊಂಬೆಟ್ಟು ಪ್ರದೇಶದಲ್ಲಿ ನಿವೃತ್ತ ಪ್ರಾಂಶುಪಾಲರ ಮನೆಗೆ ಹೆಲ್ಮೆಟ್ ಧರಿಸಿದ ಇಬ್ಬರು ವ್ಯಕ್ತಿಗಳು ದರೋಡೆಗೆ ಯತ್ನಿಸಿದ ಘಟನೆ ಡಿ.17ರಂದು ನಡೆದಿದ್ದು, ಯತ್ನ ವಿಫಲವಾಗಿದೆ.

ಕೊಂಬೆಟ್ಟು ನಿವಾಸಿ, ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎ.ವಿ. ನಾರಾಯಣ್ ಹಾಗೂ ಅವರ ಪತ್ನಿ ವತ್ಸಲರಾಜ್ಞಿ ಅವರ ಮನೆಗೆ ಈ ದುಷ್ಕರ್ಮಿಗಳು ಪ್ರವೇಶಿಸಿದ್ದಾರೆ. ರಾತ್ರಿ ಊಟದ ಬಳಿಕ ವತ್ಸಲರಾಜ್ಞಿಯವರು ಮನೆಯೊಳಗೆ ಕುಳಿತಿದ್ದ ವೇಳೆ, ತೆರೆದಿದ್ದ ಹಿಂಬದಿಯ ಬಾಗಿಲಿನಿಂದ ಒಳನುಗ್ಗಿದ ಇಬ್ಬರು, ಅವರ ಕಣ್ಣು ಹಾಗೂ ಬಾಯಿಯನ್ನು ಹಿಂದಿನಿಂದ ಮುಚ್ಚಿದ್ದಾರೆ ಎನ್ನಲಾಗಿದೆ.


ಇದರಿಂದ ಆತಂಕಗೊಂಡ ವತ್ಸಲರಾಜ್ಞಿಯವರು ಹೊರಲಾಡಿದಾಗ ಕುರ್ಚಿಯಿಂದ ಕೆಳಗೆ ಬಿದ್ದು ಬೊಬ್ಬೆ ಹೊಡೆದಿದ್ದಾರೆ. ಶಬ್ದ ಕೇಳಿ ಅಲ್ಲಿಗೆ ಬಂದ ಎ.ವಿ. ನಾರಾಯಣ್ ಅವರ ಕಣ್ಣು ಮತ್ತು ಬಾಯಿಯನ್ನೂ ಮುಚ್ಚಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಈ ಸಂದರ್ಭ ಗಾಬರಿಗೊಂಡ ಆರೋಪಿಗಳು ಮನೆಯ ಹಿಂಬದಿಯ ಬಾಗಿಲ ಮೂಲಕ ಕತ್ತಲಿನಲ್ಲಿ ಪರಾರಿಯಾಗಿದ್ದಾರೆ.
ಈ ಕುರಿತು ಎ.ವಿ. ನಾರಾಯಣ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಯಲ್ಲಿ ಮನೆಯೊಳಗಿನ ಯಾವುದೇ ಸೊತ್ತುಗಳು ಕಳವಾಗಿಲ್ಲ ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.








