

ಸ್ನೇಹಿತನನ್ನು ಟವೆಲ್ನಿಂದ ಕತ್ತು ಹಿಸುಕಿ ಕೊಂದು ಬಣವೆಯಲ್ಲಿ ಸುಟ್ಟು ಹಾಕಿದ್ದ ಘಟನೆ ಬೆಳಗಾವಿ ತಾಲೂಕಿನ ಕಣಬರಗಿಯ ಮಾಲಿನಿ ನಗರದಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪರಶುರಾಮ ಕುರುಬರ ಕೊಲೆ ಆರೋಪಿ. ಸಂತೋಷ ಫರೀಟ್ ಮೃತ ವ್ಯಕ್ತಿ.
ಪತ್ನಿ ಜೊತೆ ಅನೈತಿಕ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಕ್ಕೆ ಸ್ನೇಹಿತ ಸಂತೋಷ ಫರೀಟ್ನನ್ನು ಪರಶುರಾಮ ಕುರುಬರ ಕೊಲೆ ಮಾಡಿದ್ದಾನೆ. ಸಂತೋಷ್ ಫರೀಟ್(36) ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ ಚಂದಗಡ ನಿವಾಸಿ. ಆರೋಪಿ ಪರಶುರಾಮ ಬೆಳಗಾವಿ ತಾಲೂಕಿನ ಕಣಬರಗಿ ನಿವಾಸಿ. ಕೊಲೆಯಾದ ಸಂತೋಷ್ ಪತ್ನಿ ಜೊತೆ ಪರಶುರಾಮ ಕುರಬರ ಅನೈತಿಕ ಸಂಬಂಧ ಹೊಂದಿದ್ದ. ಅಲ್ಲದೇ ಪರಶುರಾಮ ಸ್ನೇಹಿತನ ಪತ್ನಿಯನ್ನು ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ ಎನ್ನಲಾಗಿದೆ.


ಮೃತ ಸಂತೋಷ್ ಮಾರ್ಚ್ 1 ರಂದು ಬೆಳಗಾವಿ ತಾಲೂಕಿನ ಕಣಬರಗಿಗೆ ಬಂದಿದ್ದ. ಈ ವೇಳೆ ಪುಸಲಾಯಿಸಿ ಸ್ನೇಹಿತನನ್ನು ಮದ್ಯ ಕುಡಿಯಲು ಕರೆದುಕೊಂಡು ಹೋಗಿದ್ದ. ಮಾಲಿನಿ ನಗರ ಬಳಿ ಗದ್ದೆಯೊಂದರಲ್ಲಿ ಮದ್ಯಪಾನ ಮಾಡಿಸಿ ಹತ್ಯೆ ಮಾಡಿದ್ದಾನೆ. ಟವೆಲ್ನಿಂದ ಕತ್ತು ಹಿಸುಕಿ, ಭತ್ತದ ಬಣವೆಯಲ್ಲಿ ಶವವಿಟ್ಟು ಬೆಂಕಿ ಹಚ್ಚಿದ್ದ ಪರಶುರಾಮ ಪರಾರಿಯಾಗಿದ್ದ. ಪರಶುರಾಮ, ಸಂತೋಷ ಬೈಕ್ನಲ್ಲಿ ತೆರಳುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು. ಬೈಕ್ ಸಮೇತ ಆರೋಪಿಯನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.










