

ಪುಂಜಾಲಕಟ್ಟೆ : ಅಕ್ರಮವಾಗಿ ದನ ಸಾಗಿಸುತ್ತಿದ್ದ ವಾಹನವನ್ನು ನಿಲ್ಲಿಸುವಂತೆ ಸೂಚನೆ ನೀಡಿದ ಪೊಲೀಸರ ಮೇಲೆ ಗಾಡಿ ಹತ್ತಿಸಿ ಕೊಲ್ಲಲು ಪ್ರಯತ್ನಿಸಿದ ಘಟನೆ ವಾಮದಪದವು ಸಮೀಪದ ಕುದ್ಕೊಳಿ ಎಂಬಲ್ಲಿ ಇಂದು ಮುಂಜಾನೆ ವೇಳೆ ನಡೆದಿದೆ.
ವಾಮದಪದವು ಸಮೀಪದ ಕುದ್ಕೊಳಿ ಎಂಬಲ್ಲಿ ಪುಂಜಾಲಕಟ್ಟೆ ಎಸ್. ಐ. ಸುತೇಶ್ ಎಂಬವರ ಮೇಲೆ ದನ ಸಾಗಾಟ ಮಾಡುತ್ತಿದ್ದ ಆರೋಪಿಗಳು ವಾಹನ ನುಗ್ಗಿಸಲು ಪ್ರಯತ್ನಿಸಿ ಪರಾರಿಯಾಗಿದ್ದಾರೆ.

ರಾತ್ರಿ ವೇಳೆ ಕಾರ್ಯಾಚರಣೆಯಲ್ಲಿದ್ದ ಎಸ್. ಐ ಸುತೇಶ್ ಅವರು ಕುದ್ಕೊಳಿ ಎಂಬಲ್ಲಿ ಸಂಶಯಾಸ್ಪದ ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದಾಗ ಚಾಲಕ ವಾಹನ ನಿಲ್ಲಿಸದೆ ಎಸ್.ಐ. ಮೇಲೆ ನುಗ್ಗಿಸಲು ಯತ್ನಿಸಿದ. ಇದರ ಪರಿಣಾಮವಾಗಿ ಎಸ್.ಐ ಕೈಗೆ ಗಾಯವಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ. ರಾತ್ರಿ ವೇಳೆ ಆರೋಪಿಗಳು ಹಟ್ಟಿಯಿಂದ ಕಳ್ಳತನ ಮಾಡಿ ತಂದಿರುವ ದನಗಳಾಗಿರಬೇಕು ಎಂಬ ಸಂಶಯ ಇದೆ.
ವಾಹನದಲ್ಲಿ ಮೂರು ದನಗಳಿದ್ದು, ಒಂದು ದನ ಹಾಲು ಕೊಡುವುದು ಇನ್ನೊಂದು ಗಬ್ಬದ ದನ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಾಹನದಲ್ಲಿ ಇಬ್ಬರು ಆರೋಪಿಗಳಿದ್ದು, ವಾಹನ ಬಿಟ್ಟು ಪರಾರಿಯಾಗಿದ್ದಾರೆ.









