ಪುತ್ತೂರು: ಪುತ್ತೂರು ಪ್ರಾದೇಶಿಕ ಸಾರಿಗೆ ಇಲಾಖೆಗೆ ಬಸ್ವೊಂದರ ತೆರಿಗೆ ತೆರಿಗೆ ಪಾವತಿಸದೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ದಂಡ ಕಟ್ಟದೆ 16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ನ್ಯಾಯಾಲಯದಲ್ಲಿ ದಂಡ ಪಾವತಿಸಿದ ಬಳಿಕ ಆತನ ಮೇಲಿರುವ ಪ್ರಕರಣ ರದ್ದುಪಡಿಸಲಾಗಿದೆ.
ನೆಕ್ಕಿಲಾಡಿಯ ಅರಫ್ ಕಾಟೇಜ್ನ ಪಿ.ಉಸ್ಮಾನ್(42ವ)ರವರು ಬಂಧಿತ ಆರೋಪಿ,

ಅವರು 2005ನೇ ಇಸವಿಯಲ್ಲಿ ಕೆ.ಎ 21 ಸಿ 5772 ನೋಂದಣಿಯ ಖಾಸಗಿ ಬಸ್ನ ಮಾಲಕರಾಗಿದ್ದು, ಆ ಬಸ್ಗೆ ಪ್ರಾದೇಶಿಕ ಸಾರಿಗೆ ಇಲಾಖೆಗೆ ತೆರಿಗೆಯನ್ನು ಪಾವತಿಸದೆ ಓಡಿಸುತ್ತಿದ್ದರು. ಈ ಕುರಿತು ಪುತ್ತೂರು ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಉಸ್ಮಾನ್ ಅವರ ವಿರುದ್ಧ ದೋಷಾರೋಪನ ಪಟ್ಟಿ ಸಲ್ಲಿಸಿದ್ದರು.

ಆರೋಪಿ ಉಸ್ಮಾನ್ ಅವರು ನ್ಯಾಯಾಲಯಕ್ಕೆ ದಂಡ ಪಾವತಿಸದೆ ಸುಮಾರು 16 ವರ್ಷದಿಂದ ತಲೆಮರೆಸಿಕೊಂಡಿದ್ದರು. ನ್ಯಾಯಾಲಯ ಆರೋಪಿ ವಿರುದ್ಧ ವಾರಂಟ್ ಜಾರಿ ಮಾಡಿತ್ತು. ತನಿಖೆ ಕೈಗೆತ್ತಿಕೊಂಡ ಪುತ್ತೂರು ಪುತ್ತೂರು ನಗರ ಠಾಣಾ ಪೊಲೀಸರು ಎಸ್ಪಿ ಋಷಿಕೇಶ್ ಸೋನಾವಣೆ ಮತ್ತು ಡಿವೈಎಸ್ಪಿ ಡಾ. ವೀರಯ್ಯ ಹಿರೇಮರ್ ಅವರ ನಿರ್ದೇಶನದಂತೆ, ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಮಾರ್ಗದರ್ಶನದಲ್ಲಿ ಎಸ್.ಐ ಶ್ರೀಕಾಂತ್ ರಾಥೋಡ್ ಅವರ ನೇತೃತ್ವದಲ್ಲಿ ಎ.ಎಸ್.ಐ ಚಂದ್ರ, ಹೆಡ್ಕಾನ್ಸ್ಟೇಬಲ್ ಪರಮೇಶ್ವರ ಮತ್ತು ಸಿಬ್ಬಂದಿ ಕಿರಣ್ ಅವರು ಆರೋಪಿ ಉಸ್ಮಾನ್ ಅವರನ್ನು ಮಂಗಳೂರು ಬಲ್ಮಠದಲ್ಲಿ ಬಂಧಿಸಿದ್ದಾರೆ.

ರೂ. 1.36 ಲಕ್ಷ ದಂಡ ಪಾವತಿ
ಬಂಧಿತ ಆರೋಪಿ ಉಸ್ಮಾನ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿ ನ್ಯಾಯಾಲಯದಲ್ಲಿ ರೂ. 1,36,782 ದಂಡ ಪಾವತಿಸಿದ ಹಿನ್ನೆಲೆಯಲ್ಲಿ ಆರೋಪಿಯ ಮೇಲಿರುವ ಪ್ರಕರಣ ರದ್ದು ಪಡಿಸಿ ಆರೋಪಿಯನ್ನು ಬಿಡುಗಡೆಗೊಳಿಸಲಾಗಿದೆ.









