ಶಬರಿಮಲೆ ಯಾತ್ರಾರ್ಥಿಗಳಿಗೆ ಹೆಲಿಕಾಪ್ಟರ್ ಸೇವೆಯನ್ನು ಒದಗಿಸುವುದಕ್ಕೆ ಖಾಸಗಿ ನಾಗರಿಕ ವಿಮಾನಯಾನ ಸಂಸ್ಥೆಗೆ ಕೇರಳ ಹೈಕೋರ್ಟ್ ಶನಿವಾರ ನಿರ್ಬಂಧಿಸಿದೆ. ಅಂತಹ ಸೇವೆಗಳನ್ನು ನೀಡಲು ಪ್ರಯತ್ನಿಸುತ್ತಿರುವ ಸಂಸ್ಥೆಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೈಕೋರ್ಟ್ ಕರೆ ನೀಡಿದೆ. ಈಗ ನಡೆಯುತ್ತಿರುವ ಮಕರವಿಳಕ್ಕು ಉತ್ಸವದ ಋತುವಿನಲ್ಲಿ ಅಗಾಧವಾದ ಜನಸಂದಣಿಯನ್ನು ಕಾಣುವ ದೇವಾಲಯವು ನೈಸರ್ಗಿಕ ವಿಕೋಪಗಳಿಗೆ ಒಳಗಾಗುವ ದಟ್ಟ ಅರಣ್ಯ ಪ್ರದೇಶದಲ್ಲಿ ನೆಲೆಗೊಂಡಿದೆ ಎಂದು ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿಜಿ ಅಜಿತ್ಕುಮಾರ್ ಅವರ ವಿಭಾಗೀಯ ಪೀಠವು ಗಮನಿಸಿದೆ. ಹಬ್ಬದ ಋತುವಿನಲ್ಲಿ ಪೊಲೀಸರು ಸುರಕ್ಷಿತ ಮತ್ತು ಸಮಸ್ಯೆ ಇಲ್ಲದ ತೀರ್ಥಯಾತ್ರೆಯನ್ನು ಖಚಿತಪಡಿಸಿಕೊಳ್ಳಲು ಶಬರಿಮಲೆಯನ್ನು ರಾಜ್ಯ ಸರ್ಕಾರವು ಇತ್ತೀಚಿನ ಆದೇಶದ ಮೂಲಕ ವಿಶೇಷ ಭದ್ರತಾ ವಲಯ ಎಂದು ಘೋಷಿಸಿದೆ ಎಂದು ಅದು ಗಮನಿಸಿದೆ. ಎನ್ಹಾನ್ಸ್ ಏವಿಯೇಷನ್ ಸರ್ವಿಸಸ್ ಲಿಮಿಟೆಡ್ ಎಂಬ ಸಂಸ್ಥೆ ನಾಗರಿಕ ವಿಮಾನಯಾನ ಸಚಿವಾಲಯ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಅಥವಾ ತಿರುವಾಂಕೂರು ದೇವಸ್ವಂ ಮಂಡಳಿಯಿಂದ ಅಗತ್ಯ ಅನುಮತಿಗಳನ್ನು ಪಡೆಯದೆ ನಿಲಕ್ಕಲ್, ಶಬರಿಮಲೆಗೆ ಹೆಲಿಕಾಪ್ಟರ್ ಸೇವಾ ಪ್ಯಾಕೇಜ್ಗಳನ್ನು ನೀಡುತ್ತಿದೆ. ಸದ್ಯಕ್ಕೆ ನಿಲಕ್ಕಲ್ನಲ್ಲಿ ಹೆಲಿಕಾಪ್ಟರ್ ಸೌಲಭ್ಯಕ್ಕಾಗಿ ವಿಮಾನಯಾನ ವಲಯದ ಯಾವುದೇ ಟೂರ್ ಆಪರೇಟರ್ಗೆ ಅನುಮತಿ ನೀಡಲಾಗಿಲ್ಲ ಎಂದು ಯಾತ್ರಾರ್ಥಿಗಳಿಗೆ ತನ್ನ ವರ್ಚುವಲ್-ಕ್ಯೂ ಪ್ಲಾಟ್ಫಾರ್ಮ್ ಮೂಲಕ ತಿಳಿಸುವಂತೆ ಪೀಠವು ದೇವಸ್ವಂ ಮಂಡಳಿಗೆ ಸೂಚಿಸಿತು.
ವಿಮಾನಯಾನ ಸೇವಾ ಸಂಸ್ಥೆಯು ತನ್ನ ವೆಬ್ಸೈಟ್ ‘ಹೆಲಿ ಕೇರಳಾ ಡಾಟ್ ಕಾಮ್’ನಲ್ಲಿ (helikerala.com) ಈ ಮಾಹಿತಿ ಪ್ರಕಟಿಸುವಂತೆ ಸೂಚಿಸಲಾಗಿದೆ.
ಸಂಸ್ಥೆಯು ನೀಡುತ್ತಿದೆ ಎಂದು ಹೇಳಲಾದ ಹೆಲಿಕಾಪ್ಟರ್ ಸೇವೆಗಳಿಗೆ ಸಂಬಂಧಿಸಿದಂತೆ ಕೆಲವು ಸುದ್ದಿ ವರದಿಗಳ ಆಧಾರದ ಮೇಲೆ ನ್ಯಾಯಾಲಯವು ಸ್ವಯಂ ಪ್ರೇರಿತವಾಗಿ ವಿಚಾರಣೆ ಆರಂಭಿಸಿ ಈ ಆದೇಶವನ್ನು ನೀಡಿದೆ. ಅಂತಹ ಯಾವುದೇ ಸೌಲಭ್ಯಗಳ ಬಗ್ಗೆ ತಮಗೆ ತಿಳಿದಿಲ್ಲ ಅಥವಾ ಸಂಬಂಧಪಟ್ಟ ಸಂಸ್ಥೆಗೆ ಯಾವುದೇ ಅನುಮತಿಯನ್ನು ನೀಡಿಲ್ಲ ಎಂದು ಸರ್ಕಾರಿ ವಕೀಲರು ಮತ್ತು ದೇವಸ್ವಂ ಮಂಡಳಿಯ ವಕೀಲರು ಶುಕ್ರವಾರ ನ್ಯಾಯಾಲಯಕ್ಕೆ ತಿಳಿಸಿದ್ದರು. ನಂತರ ನ್ಯಾಯಾಲಯ ಪ್ರಕರಣವನ್ನು ಶನಿವಾರ ವಿಚಾರಣೆಗೆ ಮುಂದೂಡಿತ್ತು.
ದರ್ಶನ, ಡೋಲಿ(ಪಲ್ಲಕ್ಕಿ) ಸೇವೆ, ನಿಲಕ್ಕಲ್ನಿಂದ ಪಂಬಾಗೆ ಟ್ಯಾಕ್ಸಿ ಸೇವೆ ಇತ್ಯಾದಿ ಸೇರಿದಂತೆ ‘ಶಬರಿಮಲ ಅಯ್ಯಪ್ಪ ದರ್ಶನ ಹೆಲಿಕಾಪ್ಟರ್ ಸರ್ವೀಸ್ ಪ್ಯಾಕೇಜ್’ ಕುರಿತು ತಪ್ಪು ಜಾಹೀರಾತು ಬಿಡುಗಡೆ ಮಾಡಿರುವ ಸಂದರ್ಭವನ್ನು ವಿವರಿಸಲು ಸಂಸ್ಥೆಯ ಪರ ವಕೀಲರು ಅಸಮರ್ಥರಾಗಿದ್ದಾರೆ ಎಂದು ಶನಿವಾರ ಕರೆದಿದ್ದ ವಿಚಾರಣೆ ವೇಳೆ ನ್ಯಾಯಾಲಯ ಹೇಳಿದೆ.
ಸಂಸ್ಥೆಯು ಇನ್ನು ಮುಂದೆ ಸೇವೆಯನ್ನು ಮುಂದುವರಿಸುವುದಿಲ್ಲ ಎಂದು ಅವರು ಹೇಳಿದರು. ಈ ಕುರಿತು ಕ್ರಮ ಕೈಗೊಂಡಿರುವ ವರದಿಗಳನ್ನು ಸಲ್ಲಿಸುವಂತೆ ದೇವಸ್ವಂ ಮಂಡಳಿ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ನ್ಯಾಯಾಲಯ ಸೂಚಿಸಿದೆ. ವಿಶೇಷ ಭದ್ರತಾ ವಲಯ ಎಂದು ಘೋಷಿಸಲಾದ ಪ್ರದೇಶದಲ್ಲಿ ಹೆಲಿಕಾಪ್ಟರ್ ಸೇವೆಗಳ ಕಾರ್ಯಾಚರಣೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯದಿಂದ ಅಗತ್ಯ ಸೂಚನೆಗಳನ್ನು ಪಡೆಯುವಂತೆ ಭಾರತದ ಡೆಪ್ಯೂಟಿ ಸಾಲಿಸಿಟರ್ ಜನರಲ್ ಅವರಿಗೆ ನಿರ್ದೇಶನ ನೀಡಿದೆ. ಸೋಮವಾರ ಸೆಪ್ಟೆಂಬರ್ 21 ರಂದು ನ್ಯಾಯಾಲಯ ಈ ಪ್ರಕರಣವನ್ನು ಮತ್ತೆ ಕೈಗೆತ್ತಿಕೊಳ್ಳಲಿದೆ.