ಕೃಷ್ಣ ಜನ್ಮಾಷ್ಟಮಿ ದಿನ ಬಿಡುಗಡೆಯಾಗಿರುವ ಬಹುನಿರೀಕ್ಷಿತ ತುಳು ಚಿತ್ರ ಅಬತರ ಕಂಪ್ಲೀಟ್ ಫ್ಯಾಮಿಲಿ ಒರಿಯೆಂಟೆಡ್ ಸಿನಿಮಾ. ಅಬತರ ಅಂದ್ರೆ ಕನ್ನಡದಲ್ಲಿ ಅವಾಂತರ ಎಂದರ್ಥ. ಚಿತ್ರದ ಟೈಟಲ್ ನಂತೆ ಸಿನಿಮಾದುದ್ದಕ್ಕೂ ತುಳು ರಂಗಭೂಮಿಯ ಹಾಸ್ಯ ದಿಗ್ಗಜರ ಅಬತರ ಥಿಯೇಟರ್ ನಲ್ಲಿ ನಗೆ ಬಾಂಬು ಸಿಡಿಸುತ್ತೆ. ಹೀಗಾಗಿಯೇ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ ಈ ಕೋಸ್ಟಲ್ವುಡ್ ಚಿತ್ರ.!!
ಹಾಸ್ಯ ದಿಗ್ಗಜರ ದಂಡು…!
ಕುಸೇಲ್ದರಸೆ ನವೀನ್ ಡಿ. ಪಡೀಲ್ ಪಂಚಿಂಗ್ ಡೈಲಾಗ್, ನವರಸ ನಾಯಕ ಭೋಜರಾಜ್ ವಾಮಂಜೂರ್ ಕಾಮಿಡಿ ಟೈಮಿಂಗ್ ಮತ್ತು ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್ ಮ್ಯಾನರಿಸಂಗೆ ಪ್ರೇಕ್ಷಕರು ಎದ್ದುಬಿದ್ದು ನಗುತ್ತಿದ್ದಾರೆ.
ಚಿತ್ರದಲ್ಲಿ ಪ್ರೇಕ್ಷಕನನ್ನು ನಗಿಸಲೆಂದೇ ಹಾಸ್ಯ ಕಲಾವಿದರು ಜೊತೆಯಾಗಿದ್ದಾರೆ. ಇವರಿಗೆ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಮೇಸ್ಟ್ರಾಗಿರುವುದು ಮತ್ತೊಂದು ಹೈಲೈಟ್. ಹೀಗಾಗಿ ಹಾಸ್ಯಕ್ಕೆ ಯಾವುದೇ ಬರ ಬಂದಿಲ್ಲ.
ಇವರ ಜೊತೆ ಸಾಯಿಕೃಷ್ಣ ಕುಡ್ಲ ಪ್ರೇಕ್ಷಕರ ನಿರೀಕ್ಷೆಗೂ ಮೀರಿ ಅಬತರ ಕಟ್ಟಿದ್ದಾರೆ. ಸಿನಿಮಾ ನಿರ್ದೇಶನದ ಜವಾಬ್ದಾರಿ ಜೊತೆಗೆ ನಾಯಕನಟನಾಗಿ ಸಹಜವಾಗಿ ಅಭಿನಯಿಸಿರೋ ಅರ್ಜುನ್ ಕಾಪಿಕಾಡ್ ಒಂದೊಳ್ಳೆ ಚಿತ್ರವನ್ನು ಪ್ರೇಕ್ಷಕನ ಮುಂದಿಡುವಲ್ಲಿ ಸಫಲರಾಗಿದ್ದಾರೆ.
ಸಿನೆಮಾದಲ್ಲಿ ಇರೋದು ಒಂದೆ ಹಾಡು.!
ಹೌದು. ಈ ಸಿನಿಮಾದಲ್ಲಿ ಇರೋದು ಒಂದೇ ಹಾಡು, ಅರ್ಜುನ್ ಕಾಪಿಕಾಡ್ ಹಾಡಿರೋ “ಬಿನ್ನೆರ್ ಬೈದಿನ ಗೌಜಿಡ್…” ಗುನುಗುನಿಸುವಷ್ಟು ಸೊಗಸಾಗಿದೆ. ನಟಿ ಕ್ರಿಸ್ಟಿನಾ, ಗಾನ ಭಟ್ ನಟನೆ ಅಚ್ಚುಕಟ್ಟಾಗಿದೆ. ತಿಮ್ಮಪ್ಪ ಕುಲಾಲ್, ಲಕ್ಷ್ಮೀಶ್, ಶನಿಲ್ ಗುರು, ಚೇತನ್ ರೈ ಮಾಣಿ, ಸುಜಾತ ಶಕ್ತಿನಗರ ಪಾತ್ರ ನೆನಪಲ್ಲಿ ಉಳಿಯುತ್ತೆ.
ಚಿತ್ರದ ಒನ್ ಲೈನ್ ಸ್ಟೋರಿ ಚಿಕ್ಕದಾಗಿದ್ದು ಅದನ್ನು ಸಿನಿಮಾ ಮಾಡುವಾಗ ಕೆಲವೊಂದು ದೃಶ್ಯ “ದೀರ್ಘ” ಮತ್ತೂ ಕೆಲವೊಮ್ಮೆ “ನಿಧಾನ” ಅಂತ ಅನಿಸಿದ್ರೂ ಕಲಾವಿದರ ಅಬತರ ಇಷ್ಟಪಡೋಕೆ ಬೇರೆ ಸಾಕಷ್ಟು ಕಾರಣಗಳಿವೆ. ಬೊಳ್ಳಿ ಮೂವೀಸ್ ಲಾಂಛನದಲ್ಲಿ ನಿಖಿಲ್ ಕೀರ್ತಿ ಸಾಲಿಯಾನ್ ನಿರ್ಮಾಣ ಮಾಡಿದ್ದಾರೆ.
ಅಷ್ಟಮಿಯಂದು ಬಿಡುಗಡೆಗೊಂಡಿರುವ ಈ ಸಿನೆಮಾ ತುಳು ಸಿನಿರಸಿಕರ ಮನ ಗೆದ್ದಿದೆ. ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ.