ಮಡಿಕೇರಿ: ಶಬರಿಮಲೆಯ ಅಯ್ಯಪ್ಪನ ದರ್ಶನ ಮುಗಿಸಿ ವಾಪಸ್ಸಾಗುತ್ತಿದ್ದ ಮಡಿಕೇರಿಯ ಯುವಕನೋರ್ವ ಸಮುದ್ರಪಾಲಾಗಿ ಮೃತಪಟ್ಟ ಘಟನೆ ಕೇರಳ ರಾಜ್ಯದ ಕಣ್ಣೂರು ಬೀಚ್ನಲ್ಲಿ ನಡೆದಿದೆ.
ಮಡಿಕೇರಿ ನಗರದ ಜಲಾಶಯ ಬಡಾವಣೆ ನಿವಾಸಿ ಶಶಾಂಕ್ (25) ಮೃತ ದುರ್ದೈವಿ. ಶನಿವಾರ ಮುಂಜಾನೆ ಈ ದುರ್ಘಟನೆ ನಡೆದಿದೆ. ಇಂದು ಮಕರ ಜ್ಯೋತಿ ಇರುವ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಹೆಚ್ಚಿನ ಜನ ಸೇರುತ್ತಾರೆ ಎಂದು ಶಶಾಂಕ್ನಿದ್ದ ತಂಡವೊಂದು ನಿನ್ನೆ ಸಂಜೆಯೇ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿತ್ತು. ಅಲ್ಲಿಂದ ಮರಳುತ್ತಿದ್ದ ಸಂದರ್ಭದಲ್ಲಿ ಕಣ್ಣೂರು ಬೀಚ್ಗೆ ತೆರಳಿದ್ದರು.
ಕಣ್ಣೂರು ಸಮುದ್ರಕ್ಕೆ ಬಂದು ಸಮುದ್ರದಲ್ಲಿ ಕೆಲ ಸಮಯ ಕಾಲ ಕಳೆದು ಹೋಗುವಾಗ ಮೂವರು ಯುವಕರು ಸಮುದ್ರಕ್ಕೆ ಇಳಿದಿದ್ದಾರೆ. ಬೆಳಗ್ಗೆ ಸಮಯದಲ್ಲಿ ಸಮುದ್ರ ಅಲೆಗಳು ಹೆಚ್ಚಾಗಿ ಇರುವುದರಿಂದ ಮೂವರು ಯುವಕರು ಅಲೆಗಳಿಗೆ ಸಿಲುಕಿದ್ದಾರೆ. ಈ ವೇಳೆ ಮೂವರು ಯುವಕರಲ್ಲಿ ಇಬ್ಬರು ಯುವಕರನ್ನು ಸ್ಥಳೀಯರ ನೆರವಿನಿಂದ ರಕ್ಷಣೆ ಮಾಡಲಾಗಿದೆ.
ಆದರೆ ಶಶಾಂಕ್ ಸಮುದ್ರ ಅಲೆಗೆ ಸಿಲುಕಿ ತುಂಬಾ ದೂರ ಹೋಗಿರುವುದರಿಂದ ಆತನ ರಕ್ಷಣೆ ಮಾಡಲು ಅಸಾಧ್ಯವಾಗಿತ್ತು. ಕೆಲ ಸಮಯದ ನಂತರ ಆತನ ರಕ್ಷಣೆ ಮಾಡಲು ಸ್ಥಳೀಯರು ಮುಂದಾದ ವೇಳೆ ಶಶಾಂಕ್ ಮೃತಪಟ್ಟಿದ್ದನು. ಕಣ್ಣೂರಿನಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮಡಿಕೇರಿಗೆ ಮೃತದೇಹ ತಲುಪಲಿದೆ.