ತಮಿಳುನಾಡು: ಕೋವಿಡ್ ಗುಣಪಡಿಸುವ ಔಷಧಿ ಎಂದು ನರ್ಸ್ ಸೋಗಿನಲ್ಲಿ ಮನೆಗೆ ಬಂದಿದ್ದ ವ್ಯಕ್ತಿಯೊಬ್ಬ ನೀಡಿದ್ದ ಮಾತ್ರೆ ನುಂಗಿದ ಒಂದೇ ಮನೆಯ ಮೂವರು ಸಾವನ್ನಪ್ಪಿದ್ದು, ಮನೆಯ ಯಜಮಾನ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತಪಟ್ಟವರನ್ನು ಕರುಂಗೌಂಡನ್ವಲಸು ಗ್ರಾಮದ ನಿವಾಸಿಗಳಾದ ಕರುಪ್ಪನಕೌಂದರ್ ಎಂಬವರ ಪತ್ನಿ ಮಲ್ಲಿಕಾ, ಮಕ್ಕಳಾದ ದೀಪಾ ಮತ್ತು ಕುಪ್ಪಲ್ ಎಂದು ಗುರುತಿಸಲಾಗಿದೆ. ಮಾತ್ರೆ ತೆಗೆದುಕೊಂಡಿರುವ ಕರುಪ್ಪನಕೌಂದರ್ ಅವರ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಕೀಜ್ವಾನಿ ಗ್ರಾಮದ ಕಲ್ಯಾಣ ಸುಂದರಂ ಎಂಬಾತ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಈತ ಕೆಲ ತಿಂಗಳುಗಳ ಹಿಂದೆ ಕರುಪ್ಪನಕೌಂದರ್ ಅವರಿಂದ 15 ಲಕ್ಷ ಸಾಲ ಪಡೆದಿದ್ದ. ಇದನ್ನು ಮರು ಪಾವತಿಸಲಾಗದೆ ಕರುಪ್ಪನಕೌಂದರ್ ಅವರ ಕುಟುಂಬವನ್ನೇ ಇಲ್ಲವಾಗಿಸಲು ಕಲ್ಯಾಣ ಸುಂದರಂ ನಿರ್ಧರಿಸುತ್ತಾನೆ. ಇದಕ್ಕಾಗಿ ಆತ ತನ್ನ ಮಿತ್ರ ಶಬರಿ ಎನ್ನುವವನನ್ನು ಆರೊಗ್ಯ ಕಾರ್ಯಕರ್ತನಂತೆ ಬಿಂಬಿಸಿ ಕರುಪ್ಪನಕೌಂದರ್ ಅವರ ಮನೆಗೆ ಕಳಿಸಿದ್ದಾನೆ.
ಕರುಪ್ಪನಕೌಂದರ್ ಅವರ ಮನೆಗೆ ತಾಪಮಾನ ಯಂತ್ರ, ಆಕ್ಸಿಮೀಟರ್ ಜೊತೆಗೆ ಆರೋಗ್ಯ ಕಾರ್ಯಕರ್ತನ ವೇಷದಲ್ಲಿ ಬಂದ ಶಬರಿ, ಮನೆಯವರ ಆರೋಗ್ಯದ ಕುರಿತು ಕಾಳಜಿ ವ್ಯಕ್ತಪಡಿಸಿದ್ದಾನೆ. ಆ ಬಳಿಕ ಕೋವಿಡ್ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿ ಕಲ್ಯಾಣ ಸುಂದರಂ ನೀಡಿದ್ದ ವಿಷಕಾರಿ ಮಾತ್ರಗಳನ್ನು ಕುಟುಂಬದವರಿಗೆ ನೀಡಿದ್ದಾನೆ.
ಈ ಮಾತ್ರೆಗಳನ್ನು ತಿಂದ ಕರುಪ್ಪನಕೌಂದರ್, ಪತ್ನಿ ಮತ್ತು ಮಕ್ಕಳಿಬ್ಬರು ಸ್ಥಳದಲ್ಲೇ ಪ್ರಜ್ಞಾಹೀನರಾಗಿ ಕುಸಿದು ಬಿದ್ದಿದ್ದಾರೆ. ಸ್ಥಳೀಯರು ಇವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಪತ್ನಿ ಮಲ್ಲಿಕಾ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಮಕ್ಕಳಿಬ್ಬರು ಆಸ್ಪತ್ರೆಯಲ್ಲಿ ಸಾವಿಗೀಡಾದರೆ, ಕರುಪ್ಪನಕೌಂದರ್ ಗಂಭೀರಾವಸ್ಥೆಯಲ್ಲಿ ಇನ್ನೂ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಡುತ್ತಿದ್ದಾರೆ.
ಪೊಲೀಸರು ಪ್ರಮುಖ ಆರೋಪಿ ಕಲ್ಯಾಣ ಸುಂದರಂ ಮತ್ತು ಆತನ ಮಿತ್ರ ಶಬರಿ ಇಬ್ಬರನ್ನೂ ಬಂಧಿಸಿದ್ದಾರೆ.