ಮೈಸೂರು: ಸತ್ತು ಮಲಗಿರುವ ವೃದ್ಧೆಯಿಂದ ಆಸ್ತಿಗಾಗಿ ಖಾಲಿ ಪತ್ರಕ್ಕೆ ಹೆಬ್ಬೆಟ್ಟು ಒತ್ತಿಸಿಕೊಂಡ ಘಟನೆ ಮೈಸೂರಿನ ಶ್ರೀರಾಂಪುರದಲ್ಲಿ ನಡೆದಿದೆ. ಈ ಘಟನೆ 11 ದಿನಗಳ ಹಿಂದೆ ನಡೆದಿದೆ. ಜಯಮ್ಮ (73) ಎಂಬ ವೃದ್ದೆ ವಯೋಸಹಜ ಕಾರಣಗಳಿಂದ ಸಾವನ್ನಪ್ಪಿದ್ದರು. ಅವರು ಬದುಕಿದ್ದಾಗ ಯಾರೂ ಸರಿಯಾಗಿ ನೋಡಿಕೊಳ್ಳಲಿಲ್ಲ. ಆದರೆ ಸತ್ತಾಗ ಆಸ್ತಿಯಲ್ಲಿ ಪಾಲು ಪಡೆಯಲು ಕಿತ್ತಾಟ ನಡೆದಿದೆ.
ಜಯಮ್ಮನ ಕುಟುಂಬಕ್ಕೆ ಪಿರ್ತಾರ್ಜಿತವಾಗಿ 14 ಎಕರೆ ಆಸ್ತಿ ಇತ್ತು. ಮದುವೆಯಾದ ಹೊಸದರಲ್ಲೇ ಪತಿಯಿಂದ ದೂರವಾಗಿದ್ದ ಜಯಮ್ಮ ಆಸ್ತಿಯಲ್ಲಿ ಪಾಲು ಪಡೆಯಲು ಪತಿಯೂ ಬದುಕಿಲ್ಲ, ಮಕ್ಕಳೂ ಇಲ್ಲ. ಜಯಮ್ಮನ ಪಾಲಿನ ಪಿತ್ರಾರ್ಜಿತ ಆಸ್ತಿಗಾಗಿ ತವರು ಮನೆಯಲ್ಲಿ ಉಂಟಾದ ಗೊಂದಲ ಈಗ ಬಯಲಿಗೆ ಬಂದಿದೆ. ಜಯಮ್ಮನಿಗೆ ಇಬ್ಬರು ಅಕ್ಕಂದಿರು, ಒಬ್ಬ ತಮ್ಮ ಇದ್ದಾರೆ. ಜಯಮ್ಮ ಸತ್ತು ಮಲಗಿದಾಗ ಅಕ್ಕನ ಮಗ ಆಸ್ತಿಗಾಗಿ ಬಾಂಡ್ ಪೇಪರ್ ಮೇಲೆ ಶವದ ಹೆಬ್ಬೆಟ್ಟು ಒತ್ತಿಸಿಕೊಂಡಿದ್ದಾರೆ. ಖಾಲಿ ಪೇಪರ್ ಮೇಲೆ ಹೆಬ್ಬೆಟ್ಟು ಒತ್ತಿಸಿಕೊಳ್ಳುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.