ಉಡುಪಿ: ಪೋಷಕರಲ್ಲಿ ಅಪಹರಣದ ನಾಟಕವಾಡಿ 5 ಲಕ್ಷಕ್ಕೆ ಬೇಡಿಕೆ ಇಟ್ಟ ಮಗನ ನಿಜ ರೂಪ ಕಂಡು ಪೋಷಕರು ಮತ್ತು ಆತನನ್ನು ಹುಡುಕಲು ಹೋದ ಪೊಲೀಸರು ದಂಗಾದ ಘಟನೆ ನಡೆದಿದೆ. ಜೂನ್ 26 ರಂದು ಮುಂಜಾನೆ ಮೂರು ಗಂಟೆ ಸುಮಾರಿಗೆ ವರುಣ್ ತನ್ನ ತಂದೆ ತಾಯಿಗೆ ತನ್ನದೇ ಮೊಬೈಲ್ ನಂಬರ್ ನಿಂದ ಕರೆ ಮಾಡಿ ತನ್ನನ್ನು ಯಾರೋ ಅಪಹರಿಸಿದ್ದಾರೆ, ಅಲ್ಲದೆ ಐದು ಲಕ್ಷ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಪೋಷಕರಲ್ಲಿ ಗಾಬರಿಯಲ್ಲಿ ಹೇಳಿಕೊಂಡಿದ್ದಾನೆ, ಇದರಿಂದ ಭಯ ಭೀತರಾದ ಪೋಷಕರು ಉಡುಪಿ ನಗರ ಠಾಣೆಯಲ್ಲಿ ಮಗನ ಅಪಹರಣ ಕುರಿತು ದೂರು ನೀಡಿದ್ದಾರೆ.
ದೂರು ದಾಖಲಿಸಿಕೊಂಡ ನಗರ ಠಾಣೆ ಪೊಲೀಸ್ ಅಧಿಕಾರಿಗಳು ಮೇಲಧಿಕಾರಿಗಳ ಸೂಚನೆಯಂತೆ ಯುವಕನ ಪತ್ತೆಗೆ ವಿಶೇಷ ತಂಡವನ್ನು ರಚಿಸಿ ಪತ್ತೆಗೆ ಯುವಕನ ಮೊಬೈಲ್ ಲೊಕೇಷನ್ ಪತ್ತೆ ಮಾಡುವಾಗ ಅದು ಗೋವಾದಲ್ಲಿರುವುದು ಪತ್ತೆಯಾಗಿದೆ ಕೂಡಲೇ ಇಬ್ಬರು ಸಿಬ್ಬಂದಿಗಳನ್ನು ಗೋವಾಕ್ಕೆ ಕಳುಹಿಸಿಕೊಡಲಾಯಿತು, ಈ ವೇಳೆ ಮೊಬೈಲ್ ಲೊಕೇಷನ್ ಪರಿಶೀಲಿಸಿ ಆ ಸ್ಥಳಕ್ಕೆ ಹೋದಾಗ ಪೊಲೀಸರಿಗೆ ಶಾಕ್ ಆಗಿತ್ತು. ಅಂದರೆ ಅಪಹರಣಕ್ಕೊಳಗಾಗಿದ್ದೇನೆ ಎಂದಿದ್ದ ಯುವಕ ತನ್ನ ಗೆಳೆಯರೊಂದಿಗೆ ಗೋವಾದ ಕ್ಯಾಸಿನೋ ಒಂದರಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದ.
ಬಳಿಕ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಾಗ ತನ್ನ ತಪ್ಪನ್ನು ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ. ಪೋಷಕರ ಹಣ ಎಗರಿಸುವ ಉದ್ದೇಶ ಹಾಗೂ ಪೊಲೀಸರ ಸಮಯವನ್ನು ವ್ಯರ್ಥಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಯುವಕನ ವಿರುದ್ಧ ಕ್ರಮ ಕೈಗೊಂಡಿದ್ದು ಯುವಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಯುವಕನಿಗೆ ೧೫ ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.