ಉಪ್ಪಿನಂಗಡಿ: ಮಗಳ ಮದುವೆಗೆ ಚಿನ್ನಾಭರಣ ಖರೀದಿಸಲು ತೆರಳುತ್ತಿದ್ದಾಗ ಅಪರಿಚಿತ ವ್ಯಕ್ತಿಯೋರ್ವರ ಹತ್ತು ಲಕ್ಷ ರೂ ದೋಚಿದ ಘಟನೆ ಇಳಂತಿಲ ಗ್ರಾಮದ ಪೆದಮಲೆ ಸರಳಿ ಕಟ್ಟೆ ರಸ್ತೆಯ ರಿಫಾಯಿನಗರ ಎಂಬಲ್ಲಿ ನಡೆದಿದೆ. ಹಣ ಕಳೆದುಕೊಂಡ ಇಳಂತಿಲ ಗ್ರಾಮದ ಕಾರ್ಯಪಾಡಿ ನಿವಾಸಿ ಮಹಮ್ಮದ್.ಕೆ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಹಮ್ಮದ್.ಕೆ ಅವರು ಮಗಳ ಮದುವೆಗೆ ಚಿನ್ನಾಭರಣ ಖರೀದಿಸಲು ಸಂಗ್ರಹಿಸಿಟ್ಟಿದ್ದ ರೂ 10,000,00 ನಗದು ಹಣವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಚೀಲದಲ್ಲಿ ತುಂಬಿಸಿ ಸ್ಕೂಟರ್ನ ಸೀಟಿನ ಅಡಿಯಲ್ಲಿ ಇರಿಸಿ ಪತ್ನಿ ಮೈಮುನಾರೊಂದಿಗೆ ಉಪ್ಪಿನಂಗಡಿ ಜ್ಯುವೆಲ್ಲರಿಗೆ ತೆರಳುತ್ತಿದ್ದರು. ದಾರಿ ಮಧ್ಯೆ ಮಹಮ್ಮದ್ ಅವರ ಸಂಬಂಧಿ ಮರಣ ಹೊಂದಿದ್ದ ಮಾಹಿತಿ ತಿಳಿದು ಸ್ಕೂಟರ್ನ್ನು ತಿರುಗಿಸಿ ಪೆದಮಲೆಯಿಂದ ಸರಳಿಕಟ್ಟೆ ಹೋಗುತ್ತಿದ್ದಾಗ ಇಳಂತಿಲ ಗ್ರಾಮದ ರಿಫಾಯಿನಗರ ಎಂಬಲ್ಲಿಗೆ ತಲುಪಿದಾಗ ಸ್ಕೂಟರ್ ನಿಯಂತ್ರಣ ತಪ್ಪಿ ಬಿದ್ದು ಮಹಮ್ಮದ್ ಮತ್ತು ಪತ್ನಿ ಮೈಮುನಾ ಅವರು ಸಣ್ಣಪುಟ್ಟ ಗಾಯಗೊಂಡಿದ್ದರು.
ಚಿಕಿತ್ಸೆಗಾಗಿ ಆಟೋರಿಕ್ಷಾದಲ್ಲಿ ಹಣದ ಕಟ್ಟನ್ನು ಹಿಡಿದುಕೊಂಡು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದ ನಂತರ ಅದೇ ಆಟೋರಿಕ್ಷಾದಲ್ಲಿ ವಾಪಾಸ್ಸು ಬಂದು ಪತ್ನಿಯನ್ನು ಮನೆಗೆ ಬಿಟ್ಟು ಅಪಘಾತ ನಡೆದ ಸ್ಥಳಕ್ಕೆ ತೆರಳಿ ಹಣದ ಕಟ್ಟನ್ನು ಸ್ಕೂಟರ್ನ ಸೀಟಿನಡಿಯಲ್ಲಿ ಇಡುತ್ತಿದ್ದಂತೆ ಅಪರಿಚಿತ ವ್ಯಕ್ತಿಯೋರ್ವ ಹಣದ ಕಟ್ಟನ್ನು ಬಲವಂತವಾಗಿ ಎಳೆದುಕೊ೦ಡು ಓಡಿಹೋಗಿದ್ದಾನೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.