ಉಪ್ಪಿನಂಗಡಿ: ಎದುರುಗಡೆಯಿಂದ ರಾಂಗ್ ಸೈಡ್ನಿಂದ ಬಂದ ಮರುಳು ಸಾಗಾಟದ ಟಿಪ್ಪರ್ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಘಟನೆ ಕಡಬ ತಾಲೂಕು ಗೋಳಿತೊಟ್ಟು ಗ್ರಾಮದ ನೂಜೋಳು ಎಂಬಲ್ಲಿ ನಡೆದಿದೆ, ಈ ಬಗ್ಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮದ ನೂಜೋಳು ನಿವಾಸಿ, ಬ್ಯಾಂಕ್ ವೊಂದರಲ್ಲಿ ಉದ್ಯೋಗಿಯಾಗಿರುವ ಕುಶಾಲಪ್ಪ ನಾಯ್ಕ ಮತ್ತು ಅವರ ತಾಯಿ ಪ್ರೇಮ ಎಂಬವರು ಉಪ್ಪಿನಂಗಡಿ ಪೇಟೆಯಿಂದ ಮನೆಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಎದುರುಗಡೆಯಿಂದ ರಾಮಕುಂಜದಿಂದ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಮರಳು ತುಂಬಿದ ಲಾರಿ KL 36 B 8219 ನಂಬರಿನ ಟಿಪ್ಪರ್ ಲಾರಿ ರಾಂಗ್ ಸೈಡ್ನಿಂದ ವೇಗವಾಗಿ ಬಂದು ಸ್ಕೂಟರ್ಗೆ ಡಿಕ್ಕಿಯಾಗಿದೆ. ಪರಿಣಾಮ ಟಿಪ್ಪರಿನಡಿಗೆ ಸಿಲುಕಿಕೊಂಡ ಪ್ರೇಮ ಅವರು ಒಂದೂವರೆ ಗಂಟೆಗೂ ಹೆಚ್ಚು ಕಾಲ ನೋವಿನಿಂದ ಒದ್ದಾಡಿದ್ದಾರೆ. ನಂತರ ಎರಡು ಕ್ರೇನ್ಗಳ ಸಹಾಯದಿಂದ ಟಿಪ್ಪರ್ ತೆರವುಗೊಳಿಸಿ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಟಿಪ್ಪರ್ ಅಡಿ ಕಾಲು ಸಿಲುಕಿಕೊಂಡ ಪರಿಣಾಮ ಸುಮಾರು ಒಂದೂವರೆ ಘಂಟೆಗೂ ಹೆಚ್ಚು ಸಮಯ ಮಹಿಳೆ ಒದ್ದಾಡಿದ್ದಾರೆ.
ಒಂದೂವರೆ ಘಂಟೆಗೂ ಹೆಚ್ಚು ಕಾಲ ಟಿಪ್ಪರ್ನಡಿಯಲ್ಲಿ ಸಿಲುಕಿಕೊಂಡ ಮಹಿಳೆ: ಪವಾಡ ಸದೃಶ್ಯವಾಗಿ ಪಾರು
ಲಾರಿ ಚಾಲಕನೇ ಕುಶಾಲಪ್ಪ ಅವರನ್ನು ಎಬ್ಬಿಸಿ ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ಆದರೆ ಅವರ ತಾಯಿಯ ಕಾಲು ಸ್ಕೂಟಿ ಹಾಗೂ ಲಾರಿಯ ಮುಂಭಾಗದ ಚಕ್ರದಡಿಗೆ ಸಿಲುಕಿಕೊಂಡಿದ್ದರಿಂದ ಅವರು ಹೊರಬರಲಾರದೆ ನೋವಿನಿಂದ ಒದ್ದಾಡಿದ್ದಾರೆ. ನಂತರ ಉಪ್ಪಿನಂಗಡಿ ಪೊಲೀಸ್ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಕ್ರೇನ್ ತರಿಸಿ ಟಿಪ್ಪರ್ ಲಾರಿ ತೆರವುಗೊಳಿಸಿ ಮಹಿಳೆಯನ್ನು ಲಾರಿಯಡಿಯಿಂದ ಹೊರ ತೆಗೆದು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸುಮಾರು ಒಂದೂವರೆ ತಾಸು ಮಹಿಳೆಯ ಕಾಲು ಟಿಪ್ಪರ್ ಲಾರಿಯ ಚಕ್ರದಡಿಗೆ ಸಿಲುಕಿಕೊಂಡಿದ್ದು ನೋವಿನಿಂದ ಅವರು ಒದ್ದಾಡಿದ್ದು ನೆರೆದವರ ಹೃದಯ ಚುರ್ ಎನ್ನುವಂತಿತ್ತು . ಮಹಿಳೆಯನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅತಿವೇಗದ ಚಾಲನೆಗೆ ಕಂಗೆಟ್ಟ ಜನರು
ಘಟನೆ ನಡೆದ ರಸ್ತೆಯಲ್ಲಿ ಮರಳು ಸಾಗಾಟದ ವಾಹನ ವೇಗವಾಗಿ ಚಲಿಸುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈ ಅಪಘಾತಕ್ಕೆ ಸಂಬಂಧಿಸಿ ಕುಶಾಲಪ್ಪ ಅವರು ಪುತ್ತೂರು ಸಂಚಾರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಟಿಪ್ಪರ್ ಲಾರಿ ಚಾಲಕನ ಅತಿವೇಗ, ಅಜಾಗರೂಕತೆಯ ಮತ್ತು ನಿರ್ಲಕ್ಷ್ಯದ ಚಾಲನೆಯೇ ಕಾರಣವಾಗಿದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.