ಉಪ್ಪಿನಂಗಡಿ: ಅಪಘಾತಕ್ಕೀಡಾಗಿ ಚಿಕಿತ್ಸೆಗೆ ತುತ್ತಾಗಿರುವ ಬಡಪಾಯಿ ಕುಟುಂಬವನ್ನು ವ್ಯಕ್ತಿಯೋರ್ವ ದೋಚಲು ಯತ್ನಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಇಲ್ಲಿನ ಪೆರಿಯಡ್ಕ ಕಿ೦ಡೋವು ಮನೆ ನಿವಾಸಿ ಶೇಖರ್ ಪೂಜಾರಿ ಮಗ ಕಾಲೇಜು ವಿದ್ಯಾರ್ಥಿ ವಂದಿತ್ ಎಸ್. ಕಳೆದ ಜನವರಿ ತಿಂಗಳಲ್ಲಿ ಬಸ್ಸಿನಿಂದ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆಗೆ ಒಳಗಾಗಿದ್ದರು. ಇವರ ಚಿಕಿತ್ಸೆಗಾಗಿ ಹೆಚ್ಚಿನ ಹಣದ ಅಗತ್ಯತೆ ಮೂಡಿದ ಕಾರಣ ದಾನಿಗಳ ಸಹಕಾರ ಬಯಸಿ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಲಾಗಿತ್ತು.
ಈ ಮನವಿ ಗಮನಿಸಿದ ಓರ್ವ ವ್ಯಕ್ತಿ ತಾವು ಗುಲ್ಬರ್ಗದ ಪ್ರಖ್ಯಾ ದರ್ಗಾವೊಂದರ ಸಾಮಾಜಿಕ ಸೇವಾಯೋಜನೆಯ ಪದಾಧಿಕಾರಿ ಎಂದು ಪರಿಚಯಿಸಿ, ನಿಮ್ಮ ಸಮಸ್ಯೆಯನ್ನು ಪರಿಶೀಲಿಸಿ ಸಮಾಜದ ಮುಂದೆ ಪ್ರಸ್ತಾಪಿಸಲಾಗಿತ್ತು. ಇದೀಗ 1. 98 ಲಕ್ಷ ರೂ ಸಂಗ್ರಹಣೆಗೊಂಡಿದೆ. ಈ ಮೊತ್ತ ಪಡೆಯಲು ತಾವು ಖುದ್ದಾಗಿ ಬರುವಿರೋ ಅಥವಾ ನಾವು ಬ೦ದು ಕೊಡಬೇಕಾ ಎಂದು ತಿಳಿಸಿದ್ದರು. 1. 98 ಲಕ್ಷದ ದೊಡ್ಡ ಮೊತ್ತ ಸಿಗುವುದಾದರೆ ಗುಲ್ಬರ್ಗಕ್ಕೆ ಹೋಗುವುದಕ್ಕೆ ಮನಸ್ಸು ಮಾಡಿ, ವಿಚಾರವನ್ನು ಉಪ್ಪಿನಂಗಡಿ ಪಂಚಾಯಿತಿ ಸದಸ್ಯ ಯು. ಟಿ. ಕೌಶಿಫ್ ಗಮನಕ್ಕೆ ತರಲಾಯಿತು.
ದೂರದ ಗುಲ್ಬರ್ಗದ ಸಂಘ ಸಂಸ್ಥೆಗಳ ಬಗ್ಗೆ ಪೂರ್ಣ ಮಾಹಿತಿ ಹೊ೦ದಿರದ ಅವರು ನಲಪ್ಪಾಡ್ ಹಾಗೂ ಯು.ಟಿ. ಖಾದರ್ ಮೂಲಕ ಗುಲ್ಬರ್ಗದ ಕಾಂಗ್ರೆಸ್ ಮುಂದಾಳು ಸಂಪರ್ಕ ಸಾಧಿಸಿ ಸಂಸ್ಥೆ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ಸದ್ರಿ ಸಂಸ್ಥೆಯು ಬಹಳಷ್ಟು ಮ೦ದಿಗೆ ಆರ್ಥಿಕ ಸಹಾಯ ಒದಗಿಸುತ್ತಿದೆ ಎಂಬ ವಿಚಾರ ತಿಳಿದಿದೆ.
ಸಂಸ್ಥೆ ಶೇಖರ್ ಪೂಜಾರಿ ಮಗನಿಗೆ ಹಣಕಾಸಿನ ಸಹಾಯ ಒದಗಿಸುವ ಬಗ್ಗೆ ಯಾವುದೇ ನಿರ್ಧಾರ ತಳೆದಿಲ್ಲ ಎಂದು ತಿಳಿದು ಬಂದಿದೆ. ಕೂಡಲೇ ಫೋನಾಯಿಸಿದ ವ್ಯಕ್ತಿಯ ಬಗ್ಗೆ ವಿಚಾರಿಸಿದಾಗ ಆತನಿಗೂ ದರ್ಗಾದ ಸಮಿತಿಗೂ ಯಾವುದೇ ಸಂಬಂಧವಿಲ್ಲ ಎಂದು ಖಚಿತವಾಗಿತ್ತು.
ಇದೊಂದು ವಂಚನಾ ತಂಡದ ಕೃತ್ಯ ಎನ್ನುವುದು ಖಚಿತವಾದೊಡನೆ ಆತನಿಗೆ ಗುಲ್ಬರ್ಗಕ್ಕೆ ಬರಲು ಕಷ್ಟವಾಗುತ್ತಿದೆ. ನೀವು ಕೊಡುವ ಮೊತ್ತವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿ ಎಂದು ತಿಳಿಸಲಾಯಿತು. ನಮ್ಮದೇನೇ ಕೊಡುಗೆ ಇದ್ದರೂ ಹಣ ಪಾವತಿಸುವ ಸ್ವೀಕರಿಸುವ ಪೋಟೋ ದಾಖಲೆ ಬೇಕಾಗಿರುವುದರಿಂದ ನಾವೇ ಬಂದು ನಿಮಗೆ ಹಣ ಕೊಡುತ್ತೇವೆ. ಸದ್ಯ ನೀವು ವಾಹನದ ಪೆಟ್ರೋಲ್ 4000 ರೂ. ಮೊತ್ತವನ್ನು ನನ್ನ ಖಾತೆಗೆ ಫೋನ್ ಪೇ ಮಾಡಿ ಎಂದು ತಿಳಿಸುತ್ತಾನೆ.
ನೀವು ಕೊಡಲು ಮುಂದಾದ 1.98 ಲಕ್ಷ ರೂ. ಮೊತ್ತದಿಂದಲೇ ನಾಲ್ಕು ಸಾವಿರ ತೆಗೆದುಕೊಂಡು ಬನ್ನಿ ಎಂದು ತಿಳಿಸಿದ ಬಳಿಕ ಪೋನು ಮಾಡುವುದನ್ನೇ ನಿಲ್ಲಿಸಿದ್ದಾನೆ. ಈ ಮೂಲಕ ಹಣ ಲಪಟಾಯಿಸಲು ಯೋಜನೆ ಹೂಡಿದ್ದ ಎಂಬುವುದು ಬಯಲಾಗಿದೆ.