ಉಳ್ಳಾಲ: ಗ್ರಾಮ ಪಂಚಾಯತ್ ಹಿರಿಯ ಸದಸ್ಯರೊಬ್ಬರು ಪಂಚಾಯತ್ ಅಧ್ಯಕ್ಷರ ಕೊಠಡಿಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇದೀಗ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಮುನ್ನೂರು ಗ್ರಾಪಂ ಸದಸ್ಯ ಬಾಬು ಶೆಟ್ಟಿ ಎನ್ನಲಾಗಿದೆ.
ಘಟನೆಯ ವಿವರ: ನಿವೇಶನ ರಹಿತ ಮಹಿಳೆಯೊಬ್ಬರು ಸೆ.18ರಂದು ಸೈಟ್ಗೆ ಅರ್ಜಿ ನೀಡಲೆಂದು ಮುನ್ನೂರು ಗ್ರಾಪಂಗೆ ತೆರಳಿದ್ದರು. ಈ ವೇಳೆ ಮುನ್ನೂರು ಗ್ರಾಪಂ ಸದಸ್ಯ ಬಾಬು ಶೆಟ್ಟಿ ಅನುಚಿತವಾಗಿ ವರ್ತಿಸಿದ್ದಾನೆ. ಈ ಬಗ್ಗೆ ಮಹಿಳೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.
ಈ ವೇಳೆ ಆರೋಪಿ ಬಾಬು ಅವರನ್ನು ಅಧ್ಯಕ್ಷರ ಕೊಠಡಿಗೆ ಕರೆಸಿ ಕಿರುಕುಳ ನೀಡಿದ ಆರೋಪ ವ್ಯಕ್ತವಾಗಿತ್ತು. ಈ ಬಗ್ಗೆ ತನಿಖೆ ನಡೆಸುವಂತೆ ಡಿವೈಎಫ್ಐ ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮನವಿ ಸಲ್ಲಿಸಿ ಒತ್ತಾಯಿಸಿತ್ತು. ಪಂಚಾಯತ್ ನ ಬೇರೆ ಯಾವುದೋ ಘಟನೆಗೆ ಸಂಬಂಧಿಸಿದಂತೆ ಸಿ.ಸಿ ಟಿವಿ ಪರಿಶೀಲಿಸುತ್ತಿರುವಾಗ ಈ ಘಟನೆ ಬೆಳಕಿಗೆ ಬಂದಿದೆ. ಇದೀಗ ಮಹಿಳೆ ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.