ಕಡಬ ತಾಲೂಕಿನ ಪೇರಡ್ಕ ಚರ್ಚ್ ಒಂದರಲ್ಲಿ ಇತ್ತೀಚೆಗಷ್ಟೇ ಕೇಸರಿ ಧ್ವಜ, ದೇವರಿಗೆ ಇಡುವ ದೀಪ ಹಾಗೂ ಹಿಂದೂ ದೇವರುಗಳ ಪೋಟೋ ಇಡಲಾಗಿದೆ ಮತ್ತು ಚರ್ಚ್ ಕಟ್ಟಡಕ್ಕೆ ಹಾನಿ ಮಾಡಲಾಗಿದೆ ಎಂದು ವರ್ಗೀಸ್ ಎಂಬವರು ಕಡಬ ಠಾಣೆಗೆ ದೂರು ನೀಡಿದ್ದರು. ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಇಲ್ಲಿನ ಎನ್ಕಾಜೆ ನಿವಾಸಿ ಶೋಭರಾಜ್ ಎಂಬವರು ಚರ್ಚ್ ಜಾಗ ತಮಗೆ ಸೇರಿದ್ದು, ಅದನ್ನು ಚರ್ಚ್ ನವರು ಅತಿಕ್ರಮಣ ಮಾಡಿದ್ದಾರೆ ಎಂದು ಕಡಬ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ನೀಡಿದ್ದಾರೆ. ಇದರೊಂದಿಗೆ ಈ ಪ್ರಕರಣ ಮತ್ತೆ ಕುತೂಹಲ ಕೆರಳಿಸಿದೆ.
ಶೋಭರಾಜ್ ರವರು ತಮ್ಮ ತಂದೆಯಿಂದ ಬಂದ ಜಾಗದಲ್ಲಿ ಕೃಷಿ ಮಾಡಿಕೊಂಡಿದ್ದು ತಮ್ಮ ಸ್ವಾಧೀನದಲ್ಲಿದ್ದ ಜಾಗದಲ್ಲಿ ಪಾಳು ಬಿದ್ದ ಕಟ್ಟಡವೊಂದಿದ್ದು ಇತ್ತೀಚಿಗೆ ಅದಕ್ಕೆ ಅನ್ಯಧರ್ಮಿಯರು ಅಕ್ರಮ ಪ್ರವೇಶ ಮಾಡಿ ಅವರ ಧಾರ್ಮಿಕ ವಿಧಿವಿಧಾನ ಮಾಡಲು ತಯಾರಿ ನಡೆಸುತ್ತಿದ್ದರು .
ಈ ಬಗ್ಗೆ ಶೋಭಾರಾಜ್ ಈಗಾಗಲೇ ತಹಶೀಲ್ದಾರ್ ಹಾಗೂ ಪಿಡಿಒ ಮತ್ತು ಗ್ರಾಮ ಪಂಚಾಯತ್ ಗೆ ದೂರು ಅರ್ಜಿಯನ್ನು ನೀಡಿದ್ದು ಈ ವಿಚಾರದ ಬಗ್ಗೆ ದಿನಾಂಕ 06-05-2022 ಸಂಜೆ 6-00 ಗಂಟೆಗೆ ಜೋಸ್ ವಗೀಸ್, ಟಿ.ಜಿ ಚಾಕೋ, ವಿಕ್ಟರ್ ಮಾರ್ಟಿಸ್, ಹಾರಿಸ್ ಕಳಾರ ಹಾಗೂ ಇತರರು ಏಕಾಏಕಿ ಶೋಭಾರಾಜ್ ರವರ ಮನೆಯ ಅಂಗಳಕ್ಕೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ನೀನು ಕೊಟ್ಟಿರುವ ದೂರು ಅರ್ಜಿಯನ್ನು ವಾಪಸು ಪಡೆದು ಕೋ, ಇಲ್ಲದಿದ್ದರೆ ನಿನ್ನ ಮತ್ತು ನಿನ್ನ ಕುಟುಂಬದವರನ್ನು ಜೀವ ಸಹಿತ ಬದುಕಲು ಬಿಡುವುದಿಲ್ಲ ಎಂದು ಹಲ್ಲೆಗೆ ಮುಂದಾಗಿದ್ದಲ್ಲದೆ ಶೋಭಾರಾಜ್ ಅವರಿಗೆ ಸೇರಿದ ಕೃಷಿ ಗೇರು ಬೀಜದ ಮರವನ್ನು ಕಡಿದು ಹಾನಿ ಉಂಟು ಮಾಡಿದ್ದು, ಅಂದಾಜು ಸುಮಾರು 4000/ ರಷ್ಟು ನಷ್ಟವಾಗಿದೆ ಎಂದು ಕಡಬ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸದ್ಯ ಎರಡೂ ಘಟನೆಗಳ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು , ಸತ್ಯಾಸತ್ಯತೆಯ ಕುರಿತು ವಿಚಾರಣೆ ಮುಂದುವರಿಸಿದ್ದಾರೆ.