ಕಲ್ಲಡ್ಕ: ತಡರಾತ್ರಿ ಚಿರತೆ ಮನೆಗೆ ನುಗ್ಗಿ ನಾಯಿಯನ್ನು ಬೇಟೆಯಾಡಿ ಹೊತ್ತೊಯ್ದಿರುವ ಘಟನೆ ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದಲ್ಲಿ ನಡೆದಿದೆ.
ಕಲ್ಮಲೆ ನಿವಾಸಿ ನಾರಾಯಣ ರೈ ಎಂಬುವರ ಮನೆಗೆ ಚಿರತೆ ನುಗ್ಗಿ, ಮನೆಯಲ್ಲಿ ಸಾಕಿದ್ದ ನಾಯಿಯನ್ನು ಬೇಟೆಯಾಡಿದೆ. ಇದೆ ವೇಳೆ ಅಲ್ಲೆ ಇದ್ದ ಮತ್ತೊಂದು ನಾಯಿ ರಕ್ಷಣೆಗೆ ನುಗ್ಗಿದೆ, ರಕ್ಷಣೆಗೆ ನುಗ್ಗಿದ ನಾಯಿಯನ್ನು ಚಿರತೆ ಗಾಯಗೊಳಿಸಿದೆ.
ಈ ವೇಳೆ ನಾಯಿಗಳು ಬೊಗಳುತ್ತಿದ್ದಂತೆ ಮನೆಮಂದಿ ಎದ್ದು ಹೊರ ಬಂದು ಕಿರುಚಾಡಿದ್ದಾರೆ. ಗಾಬರಿಗೊಂಡ ಚಿರತೆ ನಾಯಿಯನ್ನು ಹೊತ್ತೋಯ್ದಿದೆ. ಗ್ರಾಮದ ಸುತ್ತ ಗುಡ್ಡಗಾಡಿನಲ್ಲಿ ಚಿರತೆ ಆಗಾಗ್ಗೆ ಪ್ರತ್ಯಕ್ಷವಾಗಿ ಗ್ರಾಮಸ್ಥರ ಕಣ್ಣಿಗೆ ಕಾಣಿಸಿಕೊಂಡಿದ್ದು ಭಯ ಹುಟ್ಟಿಸಿದೆ. ಇದೀಗ ಆಹಾರ ಬೇಟೆಗೆ ರಾತ್ರೋ ರಾತ್ರಿ ಗ್ರಾಮದ ಮನೆಗೆ ನುಗ್ಗಿ ಕಟ್ಟಿ ಹಾಕಿದ್ದ ನಾಯಿಯನ್ನು ಬಲಿ ಪಡೆದಿದೆ.
ಘಟನೆ ನಂತರ ಗ್ರಾಮಸ್ಥರು ಓಡಾಡಲು ಭಯಪಡುವಂತಾಗಿದೆ. ಚಿರತೆ ದಾಳಿ ಅನಾಹುತದಿಂದ ಅರಣ್ಯ ಇಲಾಖೆ ಸಿಬ್ಬಂದಿ ಅಲರ್ಟ್ ಆಗಿದ್ದು ಬೊನ್ ಇಟ್ಟು ಚಿರತೆ ಹಿಡಿಯುವ ಕಾರ್ಯಕ್ಕೆ ಮುಂದಾಗಿದ್ದಾರೆ.