ಕಲ್ಲಡ್ಕ: ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ವಿಜ್ಞಾನ ಸಂಘದ ವತಿಯಿಂದ ವಿಶ್ವ ಮಣ್ಣಿನ ದಿನಾಚರಣೆಯನ್ನು 6-12-2021 ರಂದು ಆಚರಿಸಲಾಯಿತು.
“ಎಷ್ಟು ವಿಚಿತ್ರವೆಂದರೆ ಮಣ್ಣು ಎಂದರೆ ಇಂದಿನ ತಲೆಮಾರಿಗೆ ‘ಕೊಳೆ’ ಎಂಬಂತಾಗಿದೆ. ನಿಜಾರ್ಥದಲ್ಲಿ ಮಣ್ಣು ಕೊಳೆಯಾಗಿಲ್ಲ,ಮಣ್ಣಿನ ಬಗ್ಗೆ ಇರುವಂತ ಮನ್ಯುಷ್ಯ ನ ಮನಸ್ಸು ಕೊಳೆಯಾಗಿದೆ. ಮಣ್ಣನ್ನು ಪ್ರೀತಿಸುವ ಪ್ರತಿಯೊಬ್ಬನಿಗೂ ಇಂದಿನ ದಿನಗಳಲ್ಲಿ ಅದರ ಸತ್ವದ ಬಗ್ಗೆ ತಿಳಿದಾಗ ಬೇಸರವಾಗುತ್ತದೆ. ಯಾಕೆಂದರೆ ಹತ್ತಾರು ವರ್ಷಗಳ ಹಿಂದೆ ಮಣ್ಣಿಗಿದ್ದ ಇದ್ದ ಸತ್ವ ಪರಿಸರ ನಾಶದ ಪ್ರಭಾವದಿಂದ ಮಣ್ಣು ಮರಳು ಆಗುತ್ತಾ ಸಾಗಿದೆ. ಈಗಲೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮಣ್ಣಿನ ಜೊತೆ ಜೀವ ಸಂಕುಲದ ಅವನತಿ ಆಗಬಹುದು ಎನ್ನುವ ಆತಂಕ.
ಕೀಟನಾಶಕಗಳ ಬಳಕೆ, ರಾಸಾಯನಿಕ ಗೊಬ್ಬರ ಇವೆಲ್ಲವೂ ಮಣ್ಣಿನ ಮೇಲೆ ಪರಿಣಾಮ ಬೀರುತ್ತಿರುವುದು ನಿತ್ಯ ಸತ್ಯ. ಇದಕ್ಕಾಗಿ ನದಿ ಸಂರಕ್ಷಣೆ, ಸಾವಯವ ಕೃಷಿ ಪದ್ಧತಿಯ ಅನುಕರಣೆ, ಜಲ ಮರುಪೂರಣ,ಅರಣ್ಯೀಕರಣ ಇದೆಲ್ಲದರ ಮೂಲಕ ಮಣ್ಣನ್ನು ಮುಂದಿನ ಪೀಳಿಗೆಗೆ ಕೂಡ ಸಂರಕ್ಷಣೆ ಮಾಡಿಕೊಂಡು ಬರಬಹುದು, ಇಲ್ಲದೆ ಹೋದರೆ ಭೂಮಿ ಅವಸಾನದತ್ತ ಮತ್ತು ಮರುಭೂಮಿಯಾಗುವತ್ತ ಸಾಗುವುದು ಖಂಡಿತ. ಕೃಷಿ ಭೂಮಿಯನ್ನು ಹೊಂದಿರುವ ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಮಣ್ಣು ಪರೀಕ್ಷೆ ನಡೆಸುವಂತೆ ಪೋಷಕರನ್ನು ಪ್ರೋತ್ಸಾಹಿಸಬೇಕು. ವಿದ್ಯಾರ್ಥಿ ದೆಸೆಯಿಂದಲೇ ಮಣ್ಣಿನ ಬಗ್ಗೆ ಕಾಳಜಿ ಮೂಡಬೇಕು ” ಎಂದು ಅಧ್ಯಾಪಕರಾದ ಸುಮಂತ್ ಆಳ್ವ ಮಣ್ಣಿನ ಮಹತ್ವದಿಂದ ತಿಳಿಸಿದರು.
ವಿಶ್ವ ಮಣ್ಣು ದಿನದ ಅಂಗವಾಗಿ “ಮಣ್ಣಿನ ಸಂರಕ್ಷಣೆಗೆ ಇರುವ ಮಾರ್ಗೋಪಾಯಗಳು ” ಎನ್ನುವ ವಿಷಯದಲ್ಲಿ ಪ್ರಬಂಧ ಸ್ಪರ್ಧೆ, ವಿವಿಧ ಮಣ್ಣಿನ ಮಾದರಿಯ ಸಂಗ್ರಹದೊಂದಿಗೆ ಮಾಹಿತಿ ಸಂಗ್ರಹಿಸುವ ಸ್ಪರ್ಧೆಯನ್ನು ಆಯೋಜಿಸಲಾಯಿತು. ಗೆದ್ದಂತಹ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ವೇದಿಕೆಯಲ್ಲಿ ಹ್ಯಾಪಿ ಹೆಲ್ತ್ ಪ್ರೈವೆಟ್ ಲಿಮಿಟೆಡ್ ನ ಹೊನ್ನಪ್ಪ ಹಾಗೂ ಸದಸ್ಯರಾದ ವೇದಾವತಿ, ವಿದ್ಯಾ, ಶೋಭಾ, ಸರಸ್ವತಿ, ಪ್ರಮೋದ್ ಕುಮಾರ್ ಹಾಗೂ ಮುಖ್ಯ ಶಿಕ್ಷಕರಾದ ರವಿರಾಜ್ ಕಣ೦ತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿಜ್ಞಾನ ಸಂಘದ ನಿರ್ದೇಶಕರಾದ ಜ್ಯೋತಿ ಶ್ರೀ ಸಿ.ಎಂ ಸ್ವಾಗತಿಸಿ, ರಮ್ಯ ಜೆ ನಿರೂಪಿಸಿದರು.