ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ನಗರದಲ್ಲಿ ಲವ್ ಜಿಹಾದ್ ಸದ್ದು ಕೇಳಿಬಂದಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿದ್ದ ಹಿಂದೂ ಹುಡುಗಿ, ಮುಸ್ಲಿಂ ಹುಡುಗ ವಿವಾಹ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆ ವೇಳೆ ಮುಸ್ಲಿಂ ಯುವಕನ ವಿರುದ್ಧ ಲವ್ ಜಿಹಾದ್ ಆರೋಪ ಹೊರಸಿದ ಹಿಂದೂ ಸಂಘಟನೆ ಕಾರ್ಯಕರ್ತರು, ಜೋಡಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಪೊಲೀಸ್ ಠಾಣೆಗೆ ಎಸ್ಡಿಪಿಐ, ದಲಿತ ಸಂಘಟನೆ ಮುಖಂಡರು ಆಗಮಿಸಿದ್ದರು. ಚಿಕ್ಕಮಗಳೂರು ಮಹಿಳಾ ಠಾಣೆಯಲ್ಲಿ ಪೊಲೀಸರಿಂದ ವಿಚಾರಣೆ ನಡೆದಿದೆ. ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ರಿಂದ ಯುವಕ, ಯುವತಿಯ ವಿಚಾರಣೆ ಮುಂದುವರೆದಿತ್ತು.
ಮಗಳಿಗಾಗಿ ತಾಯಿಯ ಕಣ್ಣೀರು
ಕಾಫಿನಾಡಿನಲ್ಲಿ ಲವ್ ಜಿಹಾದ್ ಆರೋಪ ಪ್ರಕರಣದಲ್ಲಿ ನೈತಿಕ ಪೊಲೀಸ್ ಗಿರಿ ದೂರಿನನ್ವಯ ಹಿಂದೂಪರ ಸಂಘಟನೆ ನಾಲ್ವರು ಕಾರ್ಯಕರ್ತರ ವಿರುದ್ದ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿಗೆ ಹೋದ ಸಂದರ್ಭ ನೈತಿಕ ಪೊಲೀಸ್ ಗಿರಿ ನಡೆದಿತ್ತು. ತಾಲೂಕಿನ ಲಕ್ಷ್ಮೀಪುರ ಮೂಲದ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿ ಮಧ್ಯೆ ಲವ್ ಜಿಹಾದ್ ನಡೆದಿದೆ ಎನ್ನಲಾಗಿದೆ.
ಚಿಕ್ಕಮಗಳೂರು ನಗರ ಮಹಿಳಾ ಠಾಣೆ ಮುಂದೆ ಮಗಳಿಗಾಗಿ ತಾಯಿ ಕಣ್ಣೀರು ಹಾಕಿದ್ದಾರೆ. ಪ್ರೀತಿಸಿದವನನ್ನೇ ಮದುವೆ ಆಗುತ್ತೇನೆ ಎಂದು ಯುವತಿ ನಿರ್ಧರಿಸಿದ್ದಾಳೆ. ಮಗಳು ಪೊಲೀಸ್ ಜೀಪ್ ಹತ್ತುವಾಗ ಕಣ್ಣೀರಿಟ್ಟ ತಾಯಿ, ಮಗಳ ಜೊತೆ ಮಾತನಾಡಲು ಬಿಡಿ ಎಂದು ಕಣ್ಣೀರಿಟ್ಟಿದ್ದಾಳೆ. ನನ್ನ ಮಗಳು ನನಗೆ ಬೇಕು ಎಂದು ತಾಯಿ ಕಣ್ಣೀರು ಸುರಿಸಿದ್ದಾಳೆ.
ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ ಹಿಂದೂ ಕಾರ್ಯಕರ್ತರನ್ನು, ವಿವಾಹ ನೋಂದಣಿಗೆ ಮುಂದಾಗಿದ್ದ ಜೋಡಿಯನ್ನ ವಿಚಾರಣೆ ನಡೆಸಿದ್ದಾರೆ. ವಿವಾಹ ನೋಂದಣಿಗೆ ಮುಂದಾಗಿದ್ದ ಜೋಡಿ ಮೇಲೆ ಹಲ್ಲೆ ನಡೆಸಿದ್ದರು ಅನ್ನುವ ನೈತಿಕ ಪೊಲೀಸ್ ಗಿರಿ ಆರೋಪಡಿಯಲ್ಲಿ ನಾಲ್ಕು ಜನ ಯುವಕರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಇನ್ನು ಮುಸ್ಲಿಂ ಯುವಕನ ಜೊತೆಯೇ ಮದುವೆಗೆ ಸಿದ್ದ ಎಂದು ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಆಕೆಯನ್ನು ನಂಬಿಸಿ ಮೋಸ ಮಾಡಲು ಮುಂದಾಗಿದ್ದಾನೆ ಎಂದು ಆರೋಪಿಸಿ, ಹಿಂದೂಪರ ಸಂಘಟನೆಯ ಕಾರ್ಯಕರ್ತರು, ಮುಖಂಡರು ಪೊಲೀಸರಿಗೆ ಮನವಿ ಮಾಡಿಕೊಂಡರು. ಒಟ್ಟಿನಲ್ಲಿ ಇಬ್ಬರು ಮೇಜರ್ ಆಗಿರುವುದರಿಂದ ಕಾನೂನಿನಲ್ಲಿ ಈ ಮದುವೆಯನ್ನು ನಿಲ್ಲಿಸುವುದಕ್ಕೆ ಯಾವುದೇ ಅವಕಾಶ ಇರಲಿಲ್ಲ.