ನವದೆಹಲಿ: ಕೇಂದ್ರ ಸರ್ಕಾರ ಬಹು ಪ್ರತಿಷ್ಠೆಯಿಂದ ತೆಗೆದುಕೊಂಡಿರುವ ರಾಷ್ಟ್ರೀಯ ಯೋಜನೆ ಪ್ರಧಾನ ಮಂತ್ರಿ ಗತಿಶಕ್ತಿ ಯೋಜನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ದೆಹಲಿಯ ಪ್ರಗತಿ ಮೈದಾನದಲ್ಲಿ ಹೊಸ ಎಗ್ಸ್ಹಿಬಿಷನ್ ಕಾಂಪ್ಲೆಕ್ಸ್ಅನ್ನು ಮೋದಿ ವೀಕ್ಷಣೆ ಮಾಡಿದರು. ಬಳಿಕ ಗತಿಶಕ್ತಿ ಮಾಸ್ಟರ್ ಪ್ಲಾನ್ಅನ್ನು ಲಾಂಚ್ ಮಾಡಿದರು. 100 ಲಕ್ಷ ಕೋಟಿ ರೂಪಾಯಿಗಳೊಂದಿಗೆ ಕೈಗೆತ್ತಿಗೊಳ್ಳುತ್ತಿರುವ ಪ್ರಾಜೆಕ್ಟ್ಗಳು ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಮಲ್ಟಿ ಮಾಡೆಲ್ ಕನೆಕ್ಟಿವಿಟಿ ದೇಶದ ಮೂಲಭೂತ ಸೌಕರ್ಯ ಕ್ಷೇತ್ರಗಳಲ್ಲಿ ಸಾಕಷ್ಟು ಬದಲಾವಣೆಯನ್ನು ತರಲಿದೆ. ಈ ಯೋಜನೆ ದೇಶದ ಅಭಿವೃದ್ಧಿಗೆ ಹೊಸ ದಿಕ್ಸೂಚಿ ಆಗಿ ನಿಲ್ಲಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಮೊದಲು ಇದು ಸಾಧ್ಯವಾಗುವುದಿಲ್ಲ ಎಂದುಕೊಂಡಿದ್ದೇವು. ಆದರೆ ಕೊನೆಗೂ ಯೋಜನೆಯನ್ನು ಆರಂಭ ಮಾಡುತ್ತಿರುವುದು ಸಂತಸ ತಂದಿದೆ. ಮಲ್ಟಿ ಮಾಡೆಲ್ ಕನೆಕ್ಟಿವಿಟಿಯಿಂದ ಸಂಚಾರ ಸೇರಿದಂತೆ ಸರಕು ಸಾಗಾಣಿಕೆ ಕೂಡ ವೇಗ ಪಡೆದುಕೊಳ್ಳಲಿದೆ. ಇದರಿಂದ ಯುವ ಜನತೆಗೆ ಉದ್ಯೋಗ ಅವಕಾಶಗಳು ಕೂಡ ಹೆಚ್ಚಾಗಲಿದೆ. ಲಾಜಿಸ್ಟಿಕ್ಸ್ ವೆಚ್ಚ ಕಡಿಮೆಯಾಗುವುದರೊಂದಿಗೆ ಸರಕು ಸಾಗಾಣೆ ಮತ್ತಷ್ಟು ವೃದ್ಧಿಯಾಗಲಿದೆ. ಸ್ಥಳೀಯ ಉತ್ಪನ್ನಗಳಿಗೆ ದೇಶ ಹಾಗೂ ವಿದೇಶಗಳಲ್ಲಿ ಬೇಡಿಕೆ ಹೆಚ್ಚಾಗಲಿದೆ ಎಂದು ಹೇಳಿದರು.
ಈ ಹಿಂದೆ ವರ್ಕ್ ಇನ್ ಪ್ರೋಗ್ರೆಸ್ ಬೋರ್ಡ್ಗಳನ್ನು ನೋಡುತ್ತಿದ್ದೇವು. ಆ ಬೋರ್ಡ್ ಜನರು ನೋಡಿದರೇ ಇನ್ನು ಈ ಕೆಲಸ ಯಾವಾಗ ಕಂಪ್ಲೀಟ್ ಆಗುತ್ತೋ ಅನಿಸುತ್ತಿತ್ತು. ಆದರೆ ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಇರೋದಿಲ್ಲ. ಗತಿಶಕ್ತಿ ಮೂಲಭೂತ ಸೌಲಭ್ಯಗಳ ರಂಗದಲ್ಲಿ ಬದಲಾವಣೆಗಳನ್ನು ತರಲಿದೆ. ಮುಂದಿನ 25 ವರ್ಷಗಳ ಭವಿಷ್ಯದ ದೃಷ್ಠಿಯೊಂದಿಗೆ ಭದ್ರ ಬುನಾದಿ ಹಾಕುತ್ತಿದ್ದೇವೆ. ಅಂದುಕೊಂಡಿರೋ ಸಮಯದಲ್ಲಿ ಪ್ರಾಜೆಕ್ಟ್ಗಳನ್ನು ಪೂರ್ಣಗೊಳಿಸಲು ಯೋಜನೆ ನೆರವಾಗಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಇನ್ನು ಬೆಂಗಳೂರಿನ ಖಾಸಗಿ ಹೊಟೇಲ್ನಲ್ಲಿ ನಡೆದ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ನ ಚಾಲನಾ ಕಾರ್ಯಕ್ರಮದಲ್ಲಿ ಮಾತನಾಡಿದ ವಸತಿ ಸಚಿವ ವಿ.ಸೋಮಣ್ಣ, ರಾಷ್ಟ್ರದ ವಿವಿಧ ಆರ್ಥಿಕ ವಲಯಕ್ಕೆ ಹೆಚ್ಚಿನ ಶಕ್ತಿ ನೀಡುವ ಗತಿಶಕ್ತಿ ವಿದ್ಯಮಾನ ವೇದಿಕೆಯಾಗಿದೆ. ಇದು ರೈಲ್ವೆ, ರಸ್ತೆ ಸಾರಿಗೆ ಸೇರಿದಂತೆ 16 ಮಂತ್ರಾಲಯ ಒಗ್ಗೂಡಿಸುತ್ತದೆ. ಉದ್ಯಮ ಉತ್ಪಾದನೆಯ ಹೆಚ್ಚಿಸುವಲ್ಲಿ ಸ್ಥಳೀಯರಿಗೆ ಬೆಂಬಲ ನೀಡಲಿದ್ದು, ಕೈಗಾರಿಕೋದ್ಯಮಿಗಳು ಜಾಗತಿಕವಾಗಿ ಸ್ಪರ್ಧೆಗೆ ನೆರವಾಗಲಿದೆ. ಮೋದಿ ಅವರ ಆತ್ಮ ನಿರ್ಭರ ಭಾರತಕ್ಕಾಗಿ ವಿವಿಧ ಆರ್ಥಿಕ ವಲಯದ ಬಹುಮುಖ ಸಂಪರ್ಕ ಅಗತ್ಯವಾಗಿದ್ದು, ಗತಿ ಶಕ್ತಿ ಮೂಲ ಸೌಕರ್ಯ ಜೊತೆಗೆ ಆರ್ಥಿಕ ವ್ಯವಸ್ಥೆ ಏಕೀಕರಣಗೊಳಿಸುತ್ತದೆ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಗತಿ ಶಕ್ತಿ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದರು.