ಮಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿ ಸಾಕ್ಷ್ಯ ಹೇಳಲು ಕನಕಪುರ ಬಂಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾಳೆ ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.
ಕಾಂಗ್ರೆಸ್ ನೇತೃತ್ವದ ಅಂದಿನ ರಾಜ್ಯ ಸರಕಾರದಲ್ಲಿ ಇಂಧನ ಸಚಿವರಾಗಿದ್ದ ವೇಳೆ 2016ರಲ್ಲಿ ಬೆಳ್ಳಾರೆಯ ಸಾಯಿ ಗಿರಿಧರ್ ಎಂಬವರೊಂದಿಗೆ ನಡೆದ ಸಂಭಾಷಣೆಯೊಂದರ ಪ್ರಕರಣದಲ್ಲಿ ಹಾಜರಾಗಲು ಡಿಕೆಶಿಗೆ ಮೂರು ಬಾರಿ ಸಮನ್ಸ್ ನೀಡಲಾಗಿತ್ತು.
ಸೆ.29ರಂದು ಹಾಜರಾಗುವಂತೆ ವಾರಂಟ್ ನೀಡಿದ್ದರೂ ಗೈರುಹಾಜರಾದ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಧೀಶರು ಡಿ.ಕೆ. ಶಿವಕುಮಾರ್ ಅವರಿಗೆ ನ.6ರಂದು ನ್ಯಾಯಾಲಯದ ಎದುರು ಹಾಜರಾಗುವಂತೆ ಮತ್ತೊಮ್ಮೆ ವಾರೆಂಟ್ ಜಾರಿ ಮಾಡಿತ್ತು.
ಅಲ್ಲದೆ ಡಿಕೆಶಿ ಅವರನ್ನು ಕೋರ್ಟ್ ಗೆ ಹಾಜರುಪಡಿಸುವಂತೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದರು. ಆದರೆ ಡಿ.ಕೆ.ಶಿವಕುಮಾರ್ ಅವರು ಅ.5ರಂದು ಸುಳ್ಯ ನ್ಯಾ ಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ಹೇಳಲಿದ್ದಾರೆ.
ಕೆಪಿಸಿಸಿ ಅಧ್ಯ ಕ್ಷ ಡಿ.ಕೆ. ಶಿವಕುಮಾರ್ ಅ.5ರಂದು ಬೆಳಗ್ಗೆ 7.25ಕ್ಕೆ ಬೆಂಗಳೂರ ಅಂತಾರಾಷ್ಟ್ರೀ ಯ ವಿಮಾನ ನಿಲ್ದಾಣದಿಂದ ಮಂಗಳೂರು ಏರ್ ಪೋರ್ಟ್ ಗೆ ಬಂದಿಳಿಯಲಿದ್ದು , 11 ಗಂಟೆಗೆ ರಸ್ತೆ ಮೂಲಕ ಸುಳ್ಯಕ್ಕೆ ತೆರಳಿ, 11.30ಕ್ಕೆ ನ್ಯಾಯಾಲಯದ ಎದುರು ಹಾಜರಾಗಲಿದ್ದಾರೆ.
ಮಧ್ಯಾಹ್ನ 12.30ಕ್ಕೆ ರಸ್ತೆ ಮೂಲಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಿದ್ದಾರೆ. ಸಂಜೆ 3 ಗಂಟೆಗೆ ಕುಕ್ಕೆಯಿಂದ ನಿರ್ಗಮಿಸಿ, 5.30ಕ್ಕೆ ಮಂಗಳೂರು ತಲುಪಲಿದ್ದಾರೆ. ರಾತ್ರಿ 8 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ವಾಪಸಾಗಲಿದ್ದಾರೆ ಎಂದು ಡಿಕೆಶಿಯ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.